ಕನಕಗಿರಿ: ಕನಕಗಿರಿ ಉತ್ಸವದ ಅಂಗವಾಗಿ ಇಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳ ಎರಡನೇ ದಿನವಾದ ಗುರುವಾರ ಸಾಹಸ ಪ್ರದರ್ಶನಗಳು ಭರಾಟೆ ಕಂಡು ಬಂದಿತು. ಭಾರವಾದ ಸಂಗ್ರಾಣಿ (ಸಿಂಗ್ರಾಣಿ) ಕಲ್ಲುಗಳನ್ನು ಎತ್ತುವ ಸಾಹಸ ಜನರ ಮನಸೂರೆಗೊಂಡಿತು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಗದಗ, ಬಾಗಲಕೋಟೆ, ಧಾರವಾಡ, ಕೊಪ್ಪಳ, ರಾಯಚೂರು ಜಿಲ್ಲೆಯ ಕ್ರೀಡಾ ಪಟುಗಳು ಭಾಗವಹಿಸಿದ್ದರು. 10 ಕೆ.ಜಿ. ತೂಕದಿಂದ 125 ಕೆ.ಜಿ. ವರೆಗಿನ ಸಂಗ್ರಾಣಿ ಕಲ್ಲುಗಳನ್ನು ಗದಗದಿಂದ ತರಲಾಗಿತ್ತು. ಕಲ್ಲುಗಳಿಗೆ ಪೂಜೆ ಸಲ್ಲಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಬಡಿಗೆ ಹಾಗೂ ಇತರೆ ಯಾವುದೇ ಸಾಮಾಗ್ರಿಗಳ ಸಹಾಯವಿಲ್ಲದೆ ಸಿಂಗ್ರಾಣಿ ಕಲ್ಲುಗಳನ್ನು ಕೈಯಿಂದ ತಲೆ ಮೇಲಕ್ಕೆ ಎತ್ತಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕಾದಾಟ ನಡೆಸಿದರು. ಎಂಟು ಜನರ ಸ್ಪರ್ಧಾಳುಗಳು ಕಣದಲ್ಲಿದ್ದರೂ ಇಬ್ಬರು ಮಾತ್ರ 81 ಕೆಜಿ ಭಾರದ ಕಲ್ಲುಗಳನ್ನು ಎತ್ತಿ ಪ್ರಥಮ ಸ್ಥಾನಕ್ಕಾಗಿ ಸೆಣಸಾಟ ನಡೆಸಿದರು.
ರಾಯಚೂರಿನ ವೆಂಕೋಬ ವೀರಾಪುರ ಹಾಗೂ ನರಗುಂದದ ಮುತ್ತು ಗಡ್ಡಿ 81 ಕೆ.ಜಿ. ಭಾರದ ಕಲ್ಲುಗಳನ್ನು ಸಲೀಸಾಗಿ ಎತ್ತಿ 88 ಕೆಜಿ ತೂಕ ಎತ್ತುವಲ್ಲಿ ಕಸರತ್ತು ನಡೆಸಿ ಮೂರನೆ ಯತ್ನದಲ್ಲಿ ವಿಫಲರಾದರು. ಕಲ್ಲು ಎತ್ತರಕ್ಕೆ ಎತ್ತುವ ಪ್ರಮಾಣದ ಮೇಲೆ ವೆಂಕೋಬ ವೀರಾಪುರ ಅವರಿಗೆ ಪ್ರಥಮ ಸ್ಥಾನ ಒಲಿದು ಬಂತು. ಮುತ್ತು ಗಡ್ಡಿ ಅವರು ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು.
ಕುಷ್ಟಗಿ ತಾಲ್ಲೂಕಿನ ಪುರ ಗ್ರಾಮದ ಹಾಲಪ್ಪ ಅವರು 78 ಕೆಜಿ ತೂಕದ ವರೆಗಿನ ಕಲ್ಲುಗಳನ್ನು ಎತ್ತಿ 81 ಕೆಜಿ ಭಾರದ ಕಲ್ಲನ್ನು ಎತ್ತುವಲ್ಲಿ ವಿಫಲರಾಗಿ ತೃತೀಯ ಸ್ಥಾನಕ್ಕೆ ಸೀಮಿತಗೊಂಡರು. ಬಾಗಲಕೋಟೆ ಜಿಲ್ಲೆಯ ಕಲಾದಗಿಯ 18 ವರ್ಷದ ಯುವಕ ರುದ್ರೇಶ ಅವರು ಅಂಕಣಕ್ಕೆ ಇಳಿದು ಕಲ್ಲು ಎತ್ತುವಾಗ ಅಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಸೀಳೆ, ಕೇಕೆ ಹಾಕಿ ಬೆಂಬಲಿಸಿದರು.
ವಿವಿಧ ಕೌಶಲಗಳನ್ನು ಪ್ರದರ್ಶಿಸಿದರೂ 78 ಕೆಜಿ ತೂಕದ ಕಲ್ಲುಗಳನ್ನು ಎತ್ತಿ ಕಣದಿಂದ ಹಿಂದಕ್ಕೆ ಸರಿದರು. ಮುತ್ತು ಗಡ್ಡಿ ಅವರು ಪ್ರದರ್ಶನಕ್ಕಾಗಿ ಕೈಗೆ ಬಟ್ಟೆ ಕಟ್ಟಿಕೊಂಡು 101 ಕೆಜಿ ತೂಕದ ವರೆಗಿನ ಸಿಂಗ್ರಾಣಿ ಕಲ್ಲುಗಳನ್ನು ಎತ್ತಿ ಸೈ ಎನ್ನಿಸಿಕೊಂಡರು. ಪ್ರತಿಯೊಬ್ಬ ಸ್ಪರ್ಧಾಳು ಸಹ ತೊಡೆ ತಟ್ಟಿ, ಮಣ್ಣು ಹಾಗೂ ಪೌಡರ್ ನಿಂದ ಕಲ್ಲು ಸವರಿ ಕಲ್ಲು ಎತ್ತಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಕಾಂತ ತಳವಾರ, ನಾಗರಾಜ, ಹುಸೇನಸಾಬ ಮಕಾನದಾರ ಅವರು ನಿರ್ಣಾಯಕರಾಗಿದ್ದರು. ತಂಗಡಗಿ ಟ್ರಸ್ಟ್ ಕಾರ್ಯದರ್ಶಿ ವೆಂಕಟೇಶ ತಂಗಡಗಿ ಅವರು ವಿಜೇತರಿಗೆ ಕ್ರಮವಾಗಿ ₹10 ಸಾವಿರ ಹಾಗೂ ಪಾರಿತೋಷಕ (ಪ್ರಥಮ), ₹8 ಸಾವಿರ, ಪಾರಿತೋಷಕ (ದ್ವಿತೀಯ) ಹಾಗೂ ₹7 ಸಾವಿರ ಹಾಗೂ ಪಾರಿತೋಷಕ (ತೃತೀಯ) ನೀಡಿದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಸಹಾಯಕ ಅಧಿಕಾರಿ ತಿಪ್ಪಣ್ಣ ಇದ್ದರು.
ಮಲ್ಲಕಂಬ ಪ್ರದರ್ಶನ: ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬುಧವಾರ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಳೆ ಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ವಸತಿ ಶಾಲೆಯ ಅಂಗವಿಕಲರ ಮಕ್ಕಳು ಆಕರ್ಷಕ ಮಲ್ಲಕಂಬ ಪ್ರದರ್ಶನ ಮಾಡಿದರು.
ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್.ಪಿ. ಯಶೋಧಾ ವಂಟಗೋಡಿ ಮಕ್ಕಳ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕನಕಗಿರಿ ತಹಶೀಲ್ದಾರ್ ವಿಶ್ವನಾಥ ಮುರಡಿ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಕಂದಕೂರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.