ಕನಕಗಿರಿ: ಕನಕಗಿರಿ ಉತ್ಸವದ ನಿಮಿತ್ತ ರಾಜಾ ಉಡುಚಪ್ಪ ನಾಯಕ ಹಾಗೂ ಡಾ.ಪುಟ್ಟರಾಜ ಗವಾಯಿಗಳ ವೇದಿಕೆಯಲ್ಲಿ ಪ್ರದರ್ಶನಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕ ಪ್ರದರ್ಶನ ಜನಮನ ಸೊರೆಗೊಂಡವು.
ಗಾಯಕಿ ಅನನ್ಯ ಭಟ್ ಹಾಗೂ ಅವರ ತಂಡದ ಸದಸ್ಯರು ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಸೋಮವಾರ ನಸುಕಿನವರೆಗೆ ನಡೆಯಿತು. ಹತ್ತಕ್ಕೂ ಹೆಚ್ಚು ಹಾಡುಗಳನ್ನು ಅನನ್ಯ ಭಟ್ ಹಾಡಿದರು. ಯುವಕರು ಕುಣಿದು ಕುಪ್ಪಳಿಸಿದರು.
ಗಾಯಕ ಜೀವನಸಾಬ ಬಿನ್ನಾಳ, ಗಾಯಕರಾದ ಸೂರ್ಯಕಾಂತ, ಶರಣಪ್ಪ ವಡಗೇರಿ, ಭಾಷು ಹಿರೇಮನಿ, ಇತರರ ಗಾಯನ ಗಮನ ಸೆಳೆಯಿತು. ಮಾನ್ಯಶ್ರೀ ಮಹೇಂದ್ರಕರ್ ಡಿ, ಪ್ರೇರಣಾ ಅವರು ಭರತ ನಾಟ್ಯ ಹಾಗೂ ಗಂಗಾವತಿಯ ಶ್ರೀರಾಮನಗರದ ಶ್ರೀನಿವಾಸ ತಂಡದ ಕೋಲಾಟ, ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ, ರಂಜಿತಾ ಹಾಗೂ ಸೂರ್ಯಕಾಂತ ತಂಡದವರಿಂದ ಪ್ರದರ್ಶನಗೊಂಡ ರಾಜಾ ಉಡುಚಪ್ಪ ನಾಯಕ ನಾಟಕ, ಪ್ರದರ್ಶನಗೊಂಡವು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ’ಎರಡು ದಿನಗಳ ಕಾಲ ನಡೆದ ಕನಕಗಿರಿ ಉತ್ಸವ ಅದ್ದೂರಿಯಾಗಿ ನಡೆದಿದೆ. 1.50 ಲಕ್ಷ ಜನರು ಭಾಗವಹಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಶ್ರಮ ವಹಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.