ಕಾರಟಗಿ: ಈಚೆಗೆ ಸುರಿದ ಮಳೆಯಿಂದ ತಾಲ್ಲೂಕಿನ ಗುಂಡೂರು ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ತುಂಬಲು ಕೆಲ ಅಡಿ ಮಾತ್ರ ಬಾಕಿ ಇದೆ. ಬಿಸಿಲು, ಬರಗಾಲದ ಚಿತ್ರಣದಲ್ಲಿದ್ದ ಈ ಭಾಗದ ಜನರಲ್ಲಿ ತುಂಬುತ್ತಿರುವ ಹಳ್ಳ ನೋಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಹಳ್ಳ ತುಂಬಿದ ಸುದ್ದಿ ಕೇಳಿ ವಿವಿಧ ಗ್ರಾಮಗಳ ಜನರು ತಂಡೋಪ ತಂಡವಾಗಿ ಆಗಮಿಸಿ ವೀಕ್ಷಿಸಿ, ಪರಸ್ಪರ ಖುಷಿಯ ವಿನಿಮಯ ಮಾಡಿಕೊಳ್ಳುತ್ತಿರುವುದು ಶುಕ್ರವಾರದಿಂದ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಲಕ್ಷ್ಮೀಕ್ಯಾಂಪ್- ಗುಂಡೂರು ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.
ಬಿಸಿಲಿನ ಬೇಗೆಯಿಂದ ಬೆಸತ್ತ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ತಾಲ್ಲೂಕಿನ ವಿವಿಧೆಡೆಯ ಹಳ್ಳಗಳು ಮರುಜೀವ ಪಡೆದುಕೊಂಡು ಸಂಭ್ರಮಿಸುತ್ತಿವೆ.
ಹಳ್ಳ ಹರಿಯುವ ದೃಶ್ಯ ನೋಡುಗರಲ್ಲಿ ಸಂತಸ ಮೂಡಿಸುತ್ತಿದೆ.
ಗುಂಡೂರ ಹಳ್ಳ ತುಂಬಿದ ಬಳಿಕ ಹೆಚ್ಚಾದ ನೀರು ಮುಂದೆ ಸಿದ್ದಾಪುರ ಮೊದಲಾದ ಹಳ್ಳಗಳ ಮೂಲಕ ತುಂಗಭದ್ರಾ ನದಿಯನ್ನು ಸೇರಲಿದೆ. ತುಂಗಭದ್ರಾ ಜಲಾಶಯದ ನೀರಿನ ಮೊದಲೇ ಗುಂಡೂರಿನ ಬ್ರಿಡ್ಜ್ ಕಂ ಬ್ಯಾರೇಜ್ ನೀರು ನದಿಯನ್ನು ಪ್ರವೇಶಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.