ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಕಾರಹುಣ್ಣಿಮೆ ಆಚರಿಸಲಾಯಿತು.
ವಿವಿಧ ಗ್ರಾಮಗಳಲ್ಲಿ ಕಾರಹುಣ್ಣಿಮೆ ದಿನ ಎತ್ತುಗಳನ್ನು ಕರಿ ಕರೆದರೆ, ಪಟ್ಟಣದಲ್ಲಿ ಮೂಲ ನಕ್ಷತ್ರ ನೋಡಿಕೊಂಡು ಕರಿ ಹರಿಯುವ ಸಂಪ್ರದಾಯವನ್ನು ರೂಢಿಸಿಕೊಂಡು ಬರಲಾಗಿದೆ.
ಈ ನಿಮಿತ್ತ ರೈತರು ತಮ್ಮ ಎತ್ತುಗಳ ಮೈ ತೊಳೆದು ಕರಿ ಹರಿಯಲು ಬೆಳಿಗ್ಗೆಯಿಂದಲೆ ತಯಾರಿ ನಡೆಸಿದರು. ಎತ್ತುಗಳ ಕೊಂಬು ಕೆತ್ತಿ, ಕೊಂಬು, ಮೈಗೆ ಬಣ್ಣ ಲೇಪಿಸಿ, ಕೋಡುಗಳಿಗೆ ಬಲೂನ್ ಕಟ್ಟಿ, ಬೆನ್ನಿಗೆ ಜೂಲ್ ಹಾಕಿ ಹೂವುಗಳಿಂದ ಶೃಂಗರಿಸಿದ್ದರು.ಆನೆಗೊಂದಿ ಹಾಗೂ ಕೊಪ್ಪಳ ಅಗಸಿ ಹತ್ತಿರ ಕರಿ ಹರಿಯಲಾಯಿತು.
ನಂತರ ಎತ್ತುಗಳ ಮೆರವಣಿಗೆ ರಾಜಬೀದಿ ಸೇರಿದಂತೆ ಪಟ್ಟಣದ ವಿವಿಧ ಬೀದಿಗಳಲ್ಲಿ ನಡೆಯಿತು. ಮುಂಗಾರು ಮಳೆ ರೈತಾಪಿ ವರ್ಗಕ್ಕೆ ಹರ್ಷ ಉಂಟು ಮಾಡಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ರೈತರು ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಎಲ್ಲಾ ರೈತರು ಕನಕಾಚಲಪತಿ ದೇವಸ್ಥಾನದ ಮುಂದೆ ಎತ್ತುಗಳನ್ನು ಕರೆ ತಂದು ಪೂಜೆ ಸಲ್ಲಿಸಿದರು. ರಾಜಬೀದಿ, ಹಳೆಯ ತಾವರಗೇರಾ ರಸ್ತೆಯಲ್ಲಿ ನಿಂತ ಜನತೆ ಎತ್ತುಗಳ ಮೆರವಣಿಗೆ ದೃಶ್ಯ ಕಣ್ತುಂಬಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.