ಕೊಪ್ಪಳ: ‘ರಾಜಕೀಯ ಕಾರಣಕ್ಕಾಗಿ ಕರಸೇವಕರ ವಿಚಾರವನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಮುನ್ನಲೆಗೆ ತಂದಿದೆ. ಅದೇ ರೀತಿ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ನಡೆದ ಗಲಾಟೆ ಬಗ್ಗೆಯೂ ತನಿಖೆಯಾಗಲಿ’ ಎಂದು ಎಂದು ಸಂಸದ ಸಂಗಣ್ಣ ಕರಡಿ ಆಗ್ರಹಿಸಿದರು.
ಬಿಜೆಪಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಮುಸ್ಲಿಂ ಸಮಾಜದವರನ್ನು ಓಲೈಸಲು ಸಿದ್ದರಾಮಯ್ಯ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯವೇ’ ಎಂದು ಪ್ರಶ್ನಿಸಿದರು.
‘ಮೂರು ದಶಕಗಳಲ್ಲಿ ಅನೇಕ ಬಾರಿ ಆಡಳಿತ ಮಾಡಿರುವ ಕಾಂಗ್ರೆಸ್ಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಯದಲ್ಲಿಯೇ ಕರ ಸೇವಕರ ಬಂಧನ ನೆನಪಾಯಿತೇ. ಕಾನೂನು ಕಾಪಾಡಬೇಕು ಎನ್ನುವ ಪ್ರಾಮಾಣಿಕ ಕಾಳಜಿಯಿದ್ದರೆ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಪ್ರಕರಣಕ್ಕೂ ಮರುಜೀವ ನೀಡಿ’ ಎಂದು ಸವಾಲು ಹಾಕಿದರು.
‘ಅಯೋಧ್ಯೆಗೆ ಹೋಗುವವರಿಗೆ ರಕ್ಷಣೆ ನೀಡಿ, ಇಲ್ಲವಾದರೆ ಮತ್ತೊಂದು ಗೋದ್ರಾ ಪ್ರಕರಣ ಮರುಕಳಿಸಬಹುದು ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾಗಿ ಮಾಧ್ಯಮಗಳಿಂದ ತಿಳಿದಿದ್ದೇನೆ. ಇದು ಹರಿಪ್ರಸಾದ್ ಅವರ ಪ್ರಚೋದನೆಕಾರಿಯಾಗಿ ಹೇಳಿಕೆ. ಮುಂದೆ ಅಯೋಧ್ಯೆಯಲ್ಲಿ ಗಲಾಟೆ ನಡೆದರೆ ಅದಕ್ಕೆ ಅವರೇ ಹೊಣೆಗಾರರು. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವುದು ಉತ್ತಮ’ ಎಂದು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.