ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಯುಗಾದಿ ಅಂಗವಾಗಿ ಮಾರುತೇಶ್ವರ ಜಾತ್ರಾ ಮಹೋತ್ಸವದ ಮುಳ್ಳು ಹರಿಕೆ, ಹೊಂಡೋತ್ಸವ ಕಾರ್ಯಕ್ರಮ ಬುಧವಾರ ಸಡಗರದಿಂದ ನಡೆಯಿತು.
ಗ್ರಾಮದಲ್ಲಿ ಯುಗಾದಿ ಅಮವಾಸ್ಯೆ ಹಾಗೂ ಪಾಡ್ಯದ ದಿನದಂದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡಿದ್ದ ಭಕ್ತರು ಮನೆಯಿಂದ ದೊಡ್ಡ ಮಾರುತೇಶ್ವರ ದೇವಸ್ಥಾನದ ತನಕ ದೀರ್ಘದಂಡ ನಮಸ್ಕಾರ ಹಾಕಿದರು. ಯುಗಾದಿಯಂದು ಮಾರುತೇಶ್ವರರ ಪಥಾಕಿ ಸವಾಲು, ಲಘು ರಥೋತ್ಸವ ನಡೆಯಿತು. ದುರ್ಗಾದೇವಿ ಬಯಲಾಟ ಕಲಾ ಸಾಂಸ್ಕೃತಿಕ ಸಂಘದಿಂದ ಕಡ್ಲಿಮಟ್ಟಿ ಸ್ಟೇಷನ್ ಮಾಸ್ತಾರ ಬಯಲಾಟ ಜರುಗಿತು.
ಬುಧವಾರ ಮಾರುತೇಶ್ವರನಿಗೆ ಪೂಜೆ, ಪಲ್ಲಕ್ಕಿ ಮೆರವಣಿಗೆ ಜರುಗಿತು. ಭಕ್ತರು ಕಾರಿ ಮುಳ್ಳುಗಳನ್ನು ತಂದು ಗ್ರಾಮದ ರಾಜ ಬೀದಿಯಲ್ಲಿ ಹಾಕಿ ಮೆರವಣಿಗೆ ಮಾಡಿದರು.
ಮೆರವಣಿಗೆಯಲ್ಲಿ ಭಾಜಾ ಭಜಂತ್ರಿ ಅಬ್ಬರ, ಡೊಳ್ಳು ಕುಣಿತಕ್ಕೆ ಮಕ್ಕಳು, ಯುವಕರು ಮನೆಯ ಮಾಳಿಗೆಯಿಂದ ಮಳ್ಳು ಕೊಂಪೆಯಲ್ಲಿ ಹಾರಿದರು. ಸಂಭ್ರಮದಿಂದ ಸಾಗಿದ ಮೆರವಣಿಗೆಯು ಗುಡಿದುಂಬಿದ ಬಳಿಕ ಹೊಂಡೋತ್ಸವ ನೆರವೇರಿತು. ಗೆಳೆಯರ ಬಳಗದಿಂದ ಹುತ್ತದಲ್ಲಿ ಕೈಯಿಟ್ಟ ಮುತ್ತೈದೆ ನಾಟಕ ಪ್ರದರ್ಶನ ಜರುಗಿತು.
ಕೊಪ್ಪಳ ಸಮೀಪದ ಭಾಗ್ಯನಗರದ ಮಾರುತೇಶ್ವರ ಜಾತ್ರೆ, ಕೋಟೆ ರಸ್ತೆಯ ಕಲ್ಲಗಸಿ ಮಾರುತೇಶ್ವರ ರಥೋತ್ಸವ ಮತ್ತು ತಾಲ್ಲೂಕಿನ ಮಾದಿನೂರು ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.