ಕಾರಟಗಿ: ಪಟ್ಟಣದ ಭ್ರಮರಾಂಬ ಮಲ್ಲಿಕಾರ್ಜುನ ಶಿವದೀಕ್ಷಾ ಪಾದಯಾತ್ರೆ ಹಾಗೂ ಸೇವಾ ಸಮಿತಿ ನೇತೃತ್ವದಲ್ಲಿ ಶಿವಮಾಲಾಧಾರಿಗಳು ಶ್ರೀಶೈಲಕ್ಕೆ ಬುಧವಾರ ಪಾದಯಾತ್ರೆಯಲ್ಲಿ ತೆರಳಿದರು.
ಕೆರೆ ಬಸವೇಶ್ವರ ದೇವಸ್ಥಾನದಿಂದ 8ನೇ ವರ್ಷದ ಪಾದಯಾತ್ರೆ ಆರಂಭಿಸಿದ ಮಾಲಾಧಾರಿಗಳನ್ನು ಇತರ ಮಾಲಾಧಾರಿಗಳು, ಭಕ್ತರು ಭಜನೆ ಮಾಡುತ್ತಾ ಪ್ರಮುಖ ಬೀದಿಗಳ ಮೂಲಕ ಸಾಗಿ ಶರಣಬಸವೇಶ್ವರ ಶಾಲೆಯ ಬಳಿ ಬೀಳ್ಕೊಟ್ಟರು.
ಗುರುಶಿವ ಅಮರೇಶ ಬಿಜಕಲ್ ಮಾತನಾಡಿ,‘ಅನೇಕ ದಾನಿಗಳು ನೆರವು ನೀಡಿದ್ದಾರೆ. ಪಾದಯಾತ್ರೆಯುದ್ದಕ್ಕೂ ವಿವಿಧ ಗ್ರಾಮಗಳ ಭಕ್ತರು ಉಪಾಹಾರ, ಭೋಜನ ವ್ಯವಸ್ಥೆ ಮಾಡುವರು. ಕೆಲವು ಕಡೆ ಸೇವಾ ಸಮಿತಿಯಿಂದ ಭೋಜನ, ಉಪಾಹಾರದ ವ್ಯವಸ್ಥೆ ಮಾಡಲಾಗುವುದು. 10ನೇ ದಿನ ಪಾದಯಾತ್ರಾರ್ಥಿಗಳು ಶ್ರೀಶೈಲ ತಲುಪುವರು’ ಎಂದರು.
ನೇತೃತ್ವ ವಹಿಸಿರುವ ಪರಶುರಾಮ ಬಂಡಿ ಪ್ರತಿಕ್ರಿಯಿಸಿ,‘ಪಟ್ಟಣ ಸಹಿತ ಚನ್ನಳ್ಳಿ, ಹಂಚಿನಾಳ ಕ್ಯಾಂಪ್ನ ಶಿವಮಾಲಾಧಾರಿಗಳು ಹಾಗೂ ಇಬ್ಬರು ಭಕ್ತರು ಸೇರಿ 20 ಜನರು ಯಾತ್ರೆಯಲ್ಲಿದ್ದೇವೆ. ಶ್ರೀಶೈಲದ ಕರ್ನಾಟಕ ಛತ್ರದಲ್ಲಿ ಮಾ.4ರಿಂದ 8ರವರೆಗೆ ಅನ್ನಸಂತರ್ಪಣೆ ವ್ಯವಸ್ಥೆಯ ಜೊತೆಗೆ ಕರ್ಪೂರ ಜ್ಯೋತಿ ಮೆರವಣಿಗೆ ಕಾರ್ಯಕ್ರಮ ನಡೆಸುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.