ಕೊಪ್ಪಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಎಸ್. ವಂಟಗೋಡಿ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್.ಪಿ. ಸ್ಥಾನಕ್ಕೆ ವರ್ಗಾವಣೆ ಮಾಡಿ ಗುರುವಾರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಸದ್ಯಕ್ಕೆ ಅಧಿಕಾರ ಹಸ್ತಾಂತರಿಸಬೇಡಿ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಎಸ್.ಪಿ. ಅವರಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಯಶೋಧಾ ಅವರು 2023ರ ಫೆಬ್ರುವರಿ 24ರಿಂದ ಯಶೋಧಾ ಇಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರದ ಆದೇಶದ ಪ್ರಕಾರ ಜಿಲ್ಲೆಯ ನೂತನ ಎಸ್.ಪಿ.ಯಾಗಿ ರಾಮ್ ಎಲ್.ಅರಸಿದ್ದಿ ಅವರನ್ನು ನೇಮಿಸಲಾಗಿದೆ. ಅಧಿಕಾರ ಸ್ವೀಕರಿಸಲು ರಾಮ್ ಅವರು ಸಂಜೆಯೇ ನಗರಕ್ಕೆ ಬಂದು ರಾತ್ರಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಮೇಲಧಿಕಾರಿಗಳಿಂದ ಬಂದ ಫೋನ್ ಕರೆಯಿಂದಾಗಿ ಅಧಿಕಾರ ಹಸ್ತಾಂತರ ಗುರುವಾರ ರದ್ದು ಮಾಡಲಾಯಿತು.
‘ಸದ್ಯಕ್ಕೆ ಅಧಿಕಾರ ಹಸ್ತಾಂತರಿಸಬೇಡಿ ಎಂದು ಯಶೋಧಾ ಅವರಿಗೆ, ಅಧಿಕಾರ ಸ್ವೀಕರಿಸದಂತೆ ಅರಸಿದ್ಧಿ ಅವರಿಗೆ ಮೇಲಧಿಕಾರಿಗಳು ಸೂಚಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ಇನ್ನೊಂದು ಪಟ್ಟಿ ಆದಷ್ಟು ಬೇಗ ಬರಲಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.