ಕೊಪ್ಪಳ: ಕೆಲಸ ಮಾಡಿಸಿಕೊಂಡು ಬಾಕಿ ಉಳಿಸಿಕೊಂಡಿದ್ದ ₹200 ಕೂಲಿ ನೀಡಲು ಸತಾಯಿಸಿದ್ದರಿಂದ ವ್ಯಕ್ತಿಯೊಬ್ಬ ಮಹಿಳೆಯನ್ನು ಕೊಲೆ ಮಾಡಿದ ಘಟನೆ ಕೊಪ್ಪಳ ತಾಲ್ಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ರೇಣುಕಮ್ಮ (62) ಎಂಬುವರು ಕೊಲೆಗೀಡಾಗಿದ್ದು, ಆರೋಪಿ ಮಹೇಶ ಗೊಲ್ಲರ ಎಂಬಾತನನ್ನು ಬಂಧಿಸಲಾಗಿದೆ.
ಏನಿದು ಘಟನೆ:
ಕೂಲಿ ಕೆಲಸಕ್ಕಾಗಿ ರೇಣುಕಮ್ಮ ಅವರ ಪತಿ ಅಳ್ಳಪ್ಪ ಆರೋಪಿ ಮಹೇಶ ಸೇರಿದಂತೆ ಕೆಲವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ನಿತ್ಯ ₹650 ಕೂಲಿ ಇದ್ದು ಒಟ್ಟು ನಾಲ್ಕು ದಿನ ಮಹೇಶ ಕೆಲಸ ಮಾಡಿದ್ದ. ಇದರಲ್ಲಿ ಅಳ್ಳಪ್ಪ ₹200 ಉಳಿಸಿಕೊಂಡಿದ್ದರು.
ಬಾಕಿ ಹಣದ ವಿಚಾರವಾಗಿ ಮಹೇಶ ಮತ್ತು ಅಳ್ಳಪ್ಪ ನಡುವೆ ಭಾನುವಾರ ಸಂಜೆ ನಾಗೇಶನಹಳ್ಳಿಯಲ್ಲಿ ಜಗಳ ನಡೆದು ಅದು ವಾಗ್ವಾದಕ್ಕೆ ತಿರುಗಿತ್ತು. ’ಈಗ ನನ್ನ ಬಳಿ ಹಣವಿಲ್ಲ; ನಂತರ ಕೊಡುವೆ’ ಎಂದು ಅಳ್ಳಪ್ಪ ಹೇಳಿದ್ದರಿಂದ ಮಹೇಶ ಆಕ್ರೋಶಗೊಂಡಿದ್ದ.
ಸೋಮವಾರ ರಾತ್ರಿ ಕೂಡ ಇದೇ ವಿಷಯಕ್ಕೆ ಮತ್ತೆ ನಡೆದ ಜಗಳ ಬಿಡಿಸಲು ಬಂದ ಅಳ್ಳಪ್ಪನ ಪತ್ನಿ ರೇಣುಕಮ್ಮಳಿಗೆ ಮಹೇಶ ಕಟ್ಡಿಗೆಯಿಂದ ಬಲವಾಗಿ ಹೊಡೆದಿದ್ದರಿಂದ ರೇಣುಕಮ್ಮ ಗಾಯಗೊಂಡಿದ್ದರು. ಅವರನ್ನು ಜಿಲ್ಲಾಸ್ಪತ್ರೆಗೆ ಕರೆ ತರವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ವಿರುದ್ದ ರೇಣುಕಪ್ಪ ಮಗಳು ಹುಲಿಗೆಮ್ಮ ಮಂಗಳವಾರ ನೀಡಿದ ದೂರಿನ ಅನ್ವಯ ತಾಲ್ಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.