ಕನಕಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಅವರ 86ನೇ ಜನ್ಮ ದಿನವನ್ನು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಆಚರಿಸಲಾಯಿತು.
ಪ್ರಗತಿಪರ ಸಂಘಟನೆಗಳ ತಾಲ್ಲೂಕು ಅಧ್ಯಕ್ಷ ಪಾಮಣ್ಣ ಅರಳಿಗನೂರು ಮಾತನಾಡಿ, ‘ದಲಿತ, ಹಿಂದುಳಿದ ವರ್ಗಗಳ ಚಳವಳಿ ಹುಟ್ಟು ಹಾಕಿದ ಕೃಷ್ಣಪ್ಪ ಅವರು ತಮ್ಮ ಜೀವನದ ಕೊನೆಯ ವರೆಗೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡಿದರು’ ಎಂದು ಸ್ಮರಿಸಿದರು.
‘ರೈತರು,ಕೂಲಿ ಕಾರ್ಮಿಕರು, ಬಡವರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಅವರ ಹೋರಾಟ ಮಾದರಿಯಾಗಿದೆ. ಬಡವರ ಮನೆ, ಗುಡಿಸಲಲ್ಲಿ ಹೋರಾಟದ ದೀಪ ಹಚ್ಚಿದ್ದೇನೆ, ಅದನ್ನು ಆರದಂತೆ ನೋಡಿಕೊಳ್ಳಿ ಎಂದು ಹೇಳುವ ಮೂಲಕ ಹೋರಾಟದ ಕಿಚ್ಚು ಬೆಳೆಸಿದರು’ ಎಂದು ಗುಣಗಾನ ಮಾಡಿದರು.
ಬಿಜೆಪಿ ಎಸ್.ಸಿ. ಮೋರ್ಚಾ ನಿಕಟ ಪೂರ್ವ ಮಾಜಿ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ,
ಪಟ್ಟಣ ಪಂಚಾಯಿತಿ ಸದಸ್ಯ ಶೇಷಪ್ಪ ಪೂಜಾರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಂಗಪ್ಪ ಪೂಜಾರ, ಪ್ರಮುಖರಾದ ವೆಂಕಟೇಶ ನೀರ್ಲೂಟಿ, ನಾಗೇಶ ವಾಲ್ಮೀಕಿ, ಸುರೇಶ ಕುರುಗೋಡ, ಅಶೋಕ, ಹುಸೇನಪ್ಪ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.