ಕೊಪ್ಪಳ: ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಪೊಲೀಸ್ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಬಿರುಸಿನ ಮಳೆಯ ನಡುವೆಯೂ ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದರು.
ಎಸ್.ಪಿ. ಡಾ. ರಾಮ್ ಎಲ್. ಅರಸಿದ್ದಿ ಅವರು ಹಿಂದಿನ ವರ್ಷ ದೇಶದಲ್ಲಿ ಹುತಾತ್ಮರಾದ ಪೊಲೀಸರ ಹೆಸರು ಓದುತ್ತಿದ್ದಾಗ ಏಕಾಏಕಿ ಬಿರುಸಿನಿಂದ ಮಳೆ ಸುರಿಯಿತು. ಮೂರು ಸುತ್ತು ಕುಶಾಲು ತೋಪು ಹಾರಿಸಿ ನಿಂತುಕೊಂಡಿದ್ದ ಪೊಲೀಸರು, ಬ್ಯಾಂಡ್ ತಂಡದವರು, ಹುತಾತ್ಮ ಕಟ್ಟೆಯ ನಾಲ್ಕೂ ಕಡೆ ನಿಂತಿದ್ದ ಪೊಲೀಸರು ಮಳೆಯಲ್ಲಿ ನೆಂದರೂ ತಮ್ಮ ಕರ್ತವ್ಯ ಪ್ರಜ್ಞೆ ಬಿಡಲಿಲ್ಲ. ಜೋರಾಗಿ ಸುರಿದ ಮಳೆಯಲ್ಲಿಯೇ ನಿಂತಕೊಂಡರು.
ಮುಖ್ಯ ಅತಿಥಿಗಳಾಗಿ ಬಂದಿದ್ದ ಜಿಲ್ಲಾಧಿಕಾರಿ ನಲಿನ್ ಅತುಲ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಕೂತಿದ್ದ ಜಾಗದಲ್ಲಿಯೂ ಮಳೆ ನೀರು ಸುರಿದಿದ್ದರಿಂದ ಕೊಡೆ ಮೊರೆ ಹೋದರು.
ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಕೆ, ಮೌನಾಚರಣೆ, ಪೊಲೀಸ್ ಧ್ವಜ ಅರ್ಧಕ್ಕೆ ಹಾರಿಸುವುದು ಹೀಗೆ ಎಲ್ಲ ಕಾರ್ಯಕ್ರಮಗಳು ಮುಗಿಯುವ ತನಕವೂ ಪೊಲೀಸರು ಮಳೆಯಲ್ಲಿ ನೆಂದುಕೊಂಡೇ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.