ಕುಷ್ಟಗಿ: ಬುಧವಾರ ರಾತ್ರಿ ಅತಿ ಹೆಚ್ಚಿನ ಮಳೆ ಸುರಿದು ಜಲಾವೃತಗೊಂಡು ಸಮಸ್ಯೆಗೊಳಗಾದ ಪಟ್ಟಣದ ವಿವಿಧ ಜನವಸತಿ ಪ್ರದೇಶಗಳಿಗೆ ಶಾಸಕ, ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿದರು.
ಸಂದೀಪನಗರ, ಕರೀಂ ಕಾಲೊನಿ, ಭೋವಿ ಜನರ ಕಾಲೊನಿ, ಬುತ್ತಿಬಸವೇಶ್ವರ ನಗರ, ಶಾದಿಮಹಲ್ ಪ್ರದೇಶ, ಮುಲ್ಲಾರ ಗಲ್ಲಿ ಇತರೆ ಸ್ಥಳಗಳಲ್ಲಿ ಮಳೆಯ ಮತ್ತು ಚರಂಡಿ ನೀರು ಸಂಗ್ರಹವಾಗಿ ಜನರು ತೊಂದರೆಗೆ ಒಳಗಾಗಿದ್ದು ಶಾಸಕ ಸ್ಥಳ ಪರಿಶೀಲನೆ ನಡೆಸಿದ ವೇಳೆ ಗಮನಕ್ಕೆ ಬಂದಿತು. ಈ ಸಂದರ್ಭದಲ್ಲಿ ಅಲ್ಲಿಯ ನಿವಾಸಿಗಳು ದೊಡ್ಡ ಪ್ರಮಾಣದಲ್ಲಿ ಮಳೆ ಬಂದ ಸಂದರ್ಭದಲ್ಲಿ ಪದೇ ಪದೇ ಎದುರಾಗುವ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು.
ಕಾಲುವೆ, ಚರಂಡಿಗಳ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನೈರ್ಮಲ್ಯ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಮುಂದಾಗುವಂತೆ ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರಿಗೆ ಶಾಸಕ ಪಾಟೀಲ ತಾಕೀತು ಮಾಡಿದರು.
ಪುರಸಭೆ ಸದಸ್ಯರಾದ ಕಲ್ಲೇಶ ತಾಳದ, ಅಮೀನುದ್ದಿನ್ ಮುಲ್ಲಾ, ಆಲಂಪಾಷಾ ಇತರರು ಇದ್ದರು.
ತಾಲ್ಲೂಕಿನ ವಿವಿಧ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಪ್ರಮಾಣ ಈ ರೀತಿ ಇದೆ. ಕುಷ್ಟಗಿ 59.2 ಮಿ.ಮೀ, ಹನುಮಸಾಗರ 28.2 ಮಿ.ಮೀ, ಹನುಮನಾಳ 19 ಮಿ.ಮೀ, ದೊಟಿಹಾಳ 14.1 ಮಿ.ಮೀ, ಕಿಲಾರಟ್ಟಿ 11.2 ಮಿ.ಮೀ ಮತ್ತು ತಾವರಗೇರಾದಲ್ಲಿ 34 ಮಿ.ಮೀ ಮಳೆ ದಾಖಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.
ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳ ಸೀಮಾಂತರ ಹಳ್ಳಿಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತಾಲ್ಲೂಕಿನ ಮದಲಗಟ್ಟಿ ಬಳಿಯ ನಿಡಶೇಸಿ ಕೆರೆಗೆ ನೀರು ಹರಿದುಬರುತ್ತಿರುವುದು ಕಂಡುಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.