ಮುನಿರಾಬಾದ್: ಇಲ್ಲಿನ ತೋಟಗಾರಿಕೆ ಕಾಲೇಜಿನಲ್ಲಿ ಈಚೆಗೆ ಮಾದಕ ವಸ್ತು ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ತೋಟಗಾರಿಕೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್ ಇಲಾಖೆಯ ಶರಣಪ್ಪ ಅವರು, ಮದ್ಯ, ಸಿಗರೇಟ್, ಗಾಂಜಾ, ಅಫೀಮು ಮುಂತಾದ ನಶೆ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಮಾದಕ ವಸ್ತು ಸೇವಿಸಿದ ವ್ಯಕ್ತಿ ತನ್ನ ಬುದ್ಧಿಯ ಸ್ಥಿಮಿತವನ್ನು ಕಳೆದುಕೊಳ್ಳುತ್ತಾನೆ. ನಶೆಯಲ್ಲಿ ಇನ್ನೊಬ್ಬರ ಮೇಲೆ ಹಲ್ಲೆ, ಕೊಲೆ, ಬೈಕ್ ವೀಲಿಂಗ್ ಮೂಲಕ ಅಪಘಾತಪಡಿಸುವುದು, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ, ಅಲ್ಲದೆ ಕೆಲವು ಗ್ಯಾಂಗ್ ರೇಪ್ ಪ್ರಕರಣಗಳ ಅಪರಾಧಿಗಳು ಕೂಡ ಮಾದಕ ವಸ್ತು ಸೇವಿಸಿದ ಉದಾಹರಣೆ ಇದೆ. ಇವುಗಳನ್ನು ಮಾರಾಟ ಮಾಡುವವರಿಗೆ ಯುವ ಜನತೆಯೇ ಗುರಿ. ಮಾದಕ ವಸ್ತು ಮಾರಾಟ, ಸೇವನೆ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಸಹಾಯವಾಣಿಗೆ ತಿಳಿಸಲು ಮನವಿ ಮಾಡಿದರು.
ಕಾಲೇಜಿನ ಡೀನ್ ಎನ್.ತಮ್ಮಯ್ಯ ಮಾತನಾಡಿ, ಮಾದಕ ವಸ್ತು ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಪೊಲೀಸರ ಜೊತೆ ನಮ್ಮ ಜವಾಬ್ದಾರಿಯೂ ಇದೆ ಎಂದರು. ಪ್ರಭಾರ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಈರಪ್ಪ ನಾಯ್ಕ, ಸಹಾಯಕ ಸಬ್ ಇನ್ ಸ್ಪೆಕ್ಟರ್ ಕೃಷ್ಣ, ಎನ್ಎಸ್ಎಸ್ ಘಟಕದ ಶಶಿಧರ ಚೌವ್ಹಾಣ್ ಮತ್ತು ರಾಘವೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.