ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ಬಳಿ ತುಂಗಾಭದ್ರ ನಡುಗಡೆಯಲ್ಲಿನ ನವವೃಂದಾವನ ಗಡ್ಡೆಯಲ್ಲಿ ಉತ್ತರಾಧಿಮಠದಿಂದ ಸೋಮವಾರ ರಘುವರ್ಯ ತೀರ್ಥರ ಮಧ್ಯಾರಾಧನೆ ಸಂಪನ್ನಗೊಂಡಿತು.
ಉತ್ತರಾಧಿಮಠದ ಪೀಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಧ್ಯಾರಾಧನೆ ನಿಮಿತ್ತ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ರಘುವರ್ಯ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿದರು.
ಕೂಡ್ಲಿಯ ಆರ್ಯ ಅಕ್ಷೋಭ್ಯ ತೀರ್ಥ ಮಠದ ಪೀಠಾಧೀಶ ರಘುವಿಜಯ ಶ್ರೀಪಾದಂಗಳವರು ಭಾಗವಹಿಸಿದ್ದರು.
ಬೆಳಿಗ್ಗೆ ನವವೃಂದಾವನ ಗಡ್ಡೆಯಲ್ಲಿ ಉತ್ತರಾಧಿಮಠದ ಶ್ರೀಗಳು ದಂಡೋದಕ ಸ್ನಾನ ಪೂರೈಸಿ, ಶಿಷ್ಯರಿಗೆ ಪಾಠ ಬೋಧನೆ ಮಾಡಿದರು. ಶ್ರೀಮನ್ ಮೂಲ ಸೀತಾ ಸಮೇತ ಮೂಲರಾಮ, ದಿಗ್ವಿಜಯ ರಾಮ ದೇವರ ಸಂಸ್ಥಾನ ಪೂಜೆ ನೆರವೇರಿಸಿದರು.
ನಂತರ ಮಹಾನೈವೇದ್ಯ, ಮಹಾ ಮಂಗಳಾರತಿ, ರಘುವರ್ಯ ತೀರ್ಥರ ಮೂಲವೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಹಸ್ತೋದಕ ಸಮರ್ಪಣೆ, ಮಂಗಳಾರತಿ ನಂತರ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿ ಅನುಗ್ರಹಿಸಿದರು.
ಉತ್ತರಾಧಿಮಠದ ದಿವಾನರಾದ ಶಶಿ ಆಚಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಸನ್ನಾಚಾರ್ಯ ಕಟ್ಟಿ, ರಾಮಾಚಾರ್ ಉಮರ್ಜಿ, ಆನಂದಾಚಾರ್ ಮಹಿಶಿ, ಸತ್ಯಬೋಧಾಚಾರ್, ಆನಂದಾಚಾರ್ ಜೋಶಿ, ಆನಂದಾಚಾರ್ ಹುಲಿಗಿ, ಉಪೇಂದ್ರಾಚಾರ್ ಕೇಸಕ್ಕಿ, ಪ್ರಭಂಜನಾಚಾರ್, ಅಡವಿರಾವ್ ಕಲಾಲಬಂಡಿ, ನಾರಾಯಣಾಚಾರ್ ಹುಲಿಗಿ, ಶೇಷಗಿರಿ ಆಚಾರ್, ವಾದಿರಾಜ ಕಲ್ಮಂಗಿ, ಪ್ರಭಂಜನಾಚಾರ್ ಸೇರಿದಂತೆ ಅನೇಕ ವಿದ್ವಾಂಸರು, ಪಂಡಿತರು ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರಗಳಿಂದ ನೂರಾರು ಭಕ್ತರು, ಶ್ರೀಮಠದ ಶಿಷ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.