ಕುಷ್ಟಗಿ: ತಾಲ್ಲೂಕಿನ ಬಿಜಕಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸುಮಾರು 700 ವಿದ್ಯಾರ್ಥಿಗಳಿಗೆ ಗ್ರಾಮದ ವಿರಕ್ತ ಮಠದ ಶಿವಲಿಂಗ ಸ್ವಾಮೀಜಿ ₹ 1 ಲಕ್ಷ ಮೌಲ್ಯದ ನೋಟ್ಬುಕ್ ವಿತರಿಸಿದ್ದಾರೆ.
ಈ ಹಿಂದೆ ಶಾಲೆ ಕಟ್ಟಡ ನಿರ್ಮಾಣಕ್ಕೆ ಮಠದ ಜಾಗ ನೀಡಿದ್ದ ಸ್ವಾಮೀಜಿ ಈಗ ಪ್ರಗತಿ ಹಾಗೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಆಸಕ್ತಿ ವಹಿಸಿ ₹1 ಲಕ್ಷ ವೆಚ್ಚದ ನೋಟ್ಬುಕ್ಗಳನ್ನು ವಿತರಿಸಿದ್ದಾರೆ.
ನೋಟ್ಬುಕ್ ವಿತರಿಸಿ ಮಾತನಾಡಿದ ಶಿವಲಿಂಗ ಸ್ವಾಮೀಜಿ, ದಾನ ನೀಡುವುದಕ್ಕಿಂತ ಪಡೆದ ದಾನವನ್ನು ಸದ್ಬಳಕೆ ಮಾಡಿಕೊಂಡು ಹೇಗೆ ಪ್ರಗತಿಹೊಂದಿದ್ದಾರೆ ಎಂಬುದು ಮುಖ್ಯ.ಅದೇ ರೀತಿ ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕು, ಅದಕ್ಕೆ ಪಾಲಕರು ಕಾಳಜಿ ವಹಿಸಿದರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ ಎಂದು ಹೇಳಿದರು.
ಬಿಜಕಲ್ ಸಮೂಹ ಸಂಪನ್ಮೂಲ ಕೇಂದ್ರ ಸಿಆರ್ಪಿ ಮಲ್ಲೇಶ್ ಕಿರಗಿ ಮಾತನಾಡಿ, ಎಷ್ಟೋ ಮಠಾಧೀಶರು ತಮ್ಮ ಮಠಗಳಿಗೆ ದಾನವನ್ನು ಪಡೆಯುವುದನ್ನು ನೋಡಿದ್ದೇವೆ. ಆದರೇ ಶಿವಲಿಂಗ ಸ್ವಾಮೀಜಿ ಮಠದಿಂದಲೇ ಶಾಲಾ ಮಕ್ಕಳಿಗೆ ಪ್ರತಿವರ್ಷ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮುಖ್ಯಶಿಕ್ಷಕಿ ಮಂಜುನಾಳ ಮಾತನಾಡಿದರು. ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಕಲಕೇರಿ, ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ವೀರನಗೌಡ ಪೊಲೀಸಪಾಟೀಲ, ಗ್ರಾಮಸ್ಥರಾದ ಶರಣಪ್ಪ ತಳುವಗೇರಿ. ನೀಲಕಂಠಪ್ಪ ಕಮ್ಮಾರ, ಹನುಮಂತ ವಡ್ಡರ, ಮರೆಗೌಡ ಬನಿಗೌಡರ ಹಾಗೂ ಶಿಕ್ಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.