ಕನಕಗಿರಿ: ಎರಡು ದಿನಗಳಿಂದಲೂ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಒಟ್ಟು 95 ಎಕರೆ ಭತ್ತದ ಬೆಳೆ ಹಾನಿಯಾದ ಬಗ್ಗೆ ವರದಿಯಾಗಿದೆ. ಕನಕಗಿರಿ ಸೇರಿದಂತೆ ತಾಲ್ಲೂಕಿನ ಜೀರಾಳ ಕಲ್ಗುಡಿ, ಚಿಕ್ಕಡಂಕನಲ್, ಆಕಳಕುಂಪಿ, ಉಮಳಿ ಕಾಟಾಪುರ, ಕಲಕೇರಿ, ಗೊರವಿ ಹಂಚಿನಾಳ ಗ್ರಾಮದಲ್ಲಿ ಭತ್ತ, ಹುಲಿಹೈದರ ಭಾಗದಲ್ಲಿ ತೊಗರಿ ಬೆಳೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.
ಕನಕಗಿರಿ ಹೋಬಳಿ ವ್ಯಾಪ್ತಿಯಲ್ಲಿ 18 ಎಕರೆ ಹಾಗೂ ನವಲಿ ವ್ಯಾಪ್ತಿಯಲ್ಲಿ 77 ಎಕರೆ ಪ್ರದೇಶದಲ್ಲಿ ಭತ್ತ ಹಾನಿಯಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರದಾಗಿದೆ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಮಳೆಹಾನಿಗೊಳಗಾದ ಹೊಲಗಳಿಗೆ ಭೇಟಿ ನೀಡಿದರು.
ಕೃಷಿ ಅಧಿಕಾರಿಗಳಾದ ನಾಗರಾಜ ಕೊಟಗಿ, ನವೀನಕುಮಾರ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವರಾಜ ಭೋವಿ ಹಾಗೂ ಮೈಬೂಬಸಾಬ ಅವರು ಜಂಟಿಯಾಗಿ ಬೆಳೆ ಸಮೀಕ್ಷೆ ಮಾಡಿದರು. ಪಟ್ಟಣ ವ್ಯಾಪ್ತಿಯ ರೈತರ ತೋಟಗಾರಿಕೆ ಬೆಳೆ ಸಹ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.