ಕೊಪ್ಪಳ: ಸರ್ಕಾರ ನುಡಿದಂತೆ ನಡೆಯಲಿ ಎಂದು ಆಗ್ರಹಿಸಿ ಬುಧವಾರ ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಲಿಂಗಾಯತ ಪಂಚಮಸಾಲಿ ಹಾಗೂ ಉಪನಾಮಗಳಾದ ಗೌಡ ಲಿಂಗಾಯತ, ಮಲೆಗೌಡ, ದೀಕ್ಷಾ ಪಂಚಮಸಾಲಿಗಳಿಗೆ 2ಎ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಬೆಂಗಳೂರಿನ ಆಡಳಿತ ಪೀಠದವರೆಗೆ ಬಸವಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಐತಿಹಾಸಿಕ ದಾಖಲೆಯ ಪಾದಯಾತ್ರೆ ಮಾಡಲಾಗಿತ್ತು.
ಮಹಾಜಾಥಾ ಹಾಗೂ 23 ದಿನಗಳ ನಿರಂತರ ಧರಣಿ ಸತ್ಯಾಗ್ರಹ ಮಾಡಿದ ಮೇಲೆ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ರವರು ಸದನದ ಒಳಗೆ ನಿರಂತರ
ಹಕ್ಕೊತ್ತಾಯ ಮಾಡಿದ ಪರಿಣಾಮ ಮುಖ್ಯಮಂತ್ರಿ ಮಾ.15 ರಂದು ಆರು ತಿಂಗಳೊಳಗೆ ಅಂದರೆ ಸೆ. 15ರ ಒಳಗಡೆಯಾಗಿ ಮೀಸಲಾತಿ ಸೌಲಭ್ಯ ಕಲ್ಪಿಸುತ್ತೇವೆ ಎಂದು ಅಧಿವೇಶನದಲ್ಲಿ ಕೊಟ್ಟ ಮಾತು ಕಡತಗಳಲ್ಲಿ ದಾಖಲಾಗಿದೆ. ಕಾಲಾವಕಾಶ ಸೆ.15ಕ್ಕೆ ಮುಕ್ತಾಯವಾಗಲಿದೆ. ಆದ್ದರಿಂದ ಸರ್ಕಾರ ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಮೀಸಲಾತಿಯನ್ನು ನೀಡಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು.ಒಂದು ವೇಳೆ ವಿಳಂಬವಾದಲ್ಲಿ ಅ.1 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ಭೂತೆ,ತಾಲ್ಲೂಕು ಅಧ್ಯಕ್ಷ ಕರಿಯಪ್ಪ ಮೇಟಿ, ವೀರಣ್ಣ ಹುಬ್ಬಳ್ಳಿ,ಸಂಗಮೇಶ ಬಾದವಾಡಗಿ, ದೊಡ್ಡಬಸಪ್ಪ ಕಂಪ್ಲಿ, ಪ್ರಭುರಾಜ ಕರ್ಲಿ, ಸುರೇಶ ಶಿವನಗೌಡರು, ಶರಣಬಸನಗೌಡ ಪಾಟೀಲ ಹಲಗೇರಿ, ಆನಂದ ಉಳ್ಳಾಗಡ್ಡಿ, ಶಕುಂತಲಮ್ಮ ಮಾಲಿಪಾಟೀಲ, ಗವಿಸಿದ್ದಪ್ಪ ಕರಡಿ, ಕೊಟ್ರಪ್ಪ ತೋಟದ, ಗವಿಸಿದ್ದಪ್ಪ ಆರ್ಯೇರ, ನಿಂಗಪ್ಪ ಹಳ್ಳಿಗುಡಿ, ಈಶಣ್ಣ ಆರ್ಯೇರ, ವಿರೇಶ ಬಳಿಗಾರ, ಮುತ್ತಣ್ಣನವರ್, ಬಸನಗೌಡ ತೊಂಡಿಹಾಳ, ರಾಜಶೇಖರ ನಿಂಗೋಜಿ, ಶರಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.