ಹನುಮಸಾಗರ: ಪಟ್ಟಣದಿಂದ ಗಜೇಂದ್ರಗಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮಳೆ ಪರಿಣಾಮ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಪರದಾಟ ಪಡುತ್ತಿದ್ದಾರೆ. ರಸ್ತೆಯುದ್ದಕ್ಕೂ ತಗ್ಗುಗಳು ಬಿದ್ದಿವೆ.
ಬಸ್, ಕಾರು ಸೇರಿ ವಾಹನಗಳ ಮುಂದಿನ ಚಕ್ರ ಒಮ್ಮೆಲೇ ಗುಂಡಿಗೆ ಇಳಿದಾಗ ಚಾಸ್ಸಿಗೆ ರಸ್ತೆಯ ಉಬ್ಬಿದ ಭಾಗ ಜೋರಾಗಿ ಬಡಿಯುತ್ತಿದೆ. ಹೀಗಾಗಿ ಅನಿವಾರ್ಯವಾಗಿ ವಾಹನಗಳು ನಿಧಾನವಾಗಿ ಚಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಮಯ ಹಾಗೂ ಇಂಧನ ಎರಡೂ ವ್ಯಯವಾಗುತ್ತಿವೆ ಎನ್ನುವುದು ಚಾಲಕರ ಅಳಲು.
ಪಾದಚಾರಿಗಳೂ ಗುಂಡಿಗಳಿಂದ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ವಾಹನಗಳ ಚಾಲಕರು ಗುಂಡಿಗಳನ್ನು ತಪ್ಪಿಸಲು ಗಾಡಿಯನ್ನು ರಸ್ತೆ ಬದಿ ಇಳಿಸುವುದರಿಂದ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಇಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಗುಂಡಿ ಕಾಣದೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.
‘ಜನಪ್ರತಿನಿಧಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ರಸ್ತೆ ಮೂಲಕವೇ ನಾವು ನಿತ್ಯ ಹೊಲಕ್ಕೆ ಹೋಗುತ್ತೇವೆ. ಈ ಮಾರ್ಗದಲ್ಲೇ ಸಾಕಷ್ಟು ಬಸ್, ಕಾರುಗಳು ಓಡಾಡುವುದರಿಂದ ವಾಹನ ದಟ್ಟಣೆ ಹೆಚ್ಚಿರುತ್ತದೆ. ಸಂಬಂಧಿಸಿದವರು ರಸ್ತೆ ದುರಸ್ತಿಗೆ ಶೀಘ್ರ ಕ್ರಮತೆಗೆದುಕೊಳ್ಳಬೇಕು.ದುರ್ಗಪ್ಪ, ಹನುಮಸಾಗರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.