ಕನಕಗಿರಿ: ಲಕ್ಷ ದೀಪೋತ್ಸವ ಆಚರಣೆಗೆ ಸಂಬಂಧಿಸಿದಂತೆ ಇಲ್ಲಿನ ಕನಕಾಚಲಪತಿ ದೇವಸ್ಥಾನದಲ್ಲಿ ಬುಧವಾರ ಗ್ರಾಮಸ್ಥರ ಪೂರ್ವಭಾವಿ ಸಭೆ ನಡೆಯಿತು. ಗ್ರೇಡ್-2 ತಹಶೀಲ್ದಾರ್ ವಿರೂಪಾಕ್ಷಪ್ಪ ಹೊರಪೇಟೆ ಮಾತನಾಡಿ ‘ಲಕ್ಷ ದೀಪೋತ್ಸವ ಆಚರಣೆ ಮಾಡಬೇಕೆಂಬುದು ಭಕ್ತರ ಒತ್ತಾಸೆಯಾಗಿದೆ, ಮುಜರಾಯಿ ಇಲಾಖೆಯ ವತಿಯಿಂದ ಡಿ.12ರಂದು ಕಾರ್ತಿಕ ಅಮಾವಾಸ್ಯೆ ದಿನ ಆಚರಣೆ ಮಾಡಲಾಗುವುದು’ ಎಂದು ತಿಳಿಸಿದರು.
ದೇಗುಲವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗುವುದು, ಸಾವಿರಾರು ಭಕ್ತರು ಬರುವ ನಿರೀಕ್ಷೆ ಇದ್ದು ಭಕ್ತರಿಗೆ ಹುಗ್ಗಿ, ಬದನೆಕಾಯಿ ಪಲ್ಲೆ, ಅನ್ನ ಸಾಂಬಾರು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಬರ ಆವರಿಸಿರುವ ಹಿನ್ನೆಲೆಯಲ್ಲಿ ಕಲಾ ತಂಡಗಳ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಸುವ ಯೋಚನೆ ತಾಲ್ಲೂಕು ಆಡಳಿತದ ಮುಂದೆ ಇಲ್ಲ, ಭಕ್ತರು ತಮ್ಮ ಕಾಣಿಕೆ, ಧವಸ– ಧಾನ್ಯ ಇತರೆ ಸಾಮಾಗ್ರಿಗಳನ್ನು ನೇರವಾಗಿ ದೇವಸ್ಥಾನ ಸಮಿತಿಗೆ ನೀಡಬೇಕು ಎಂದು ಕೋರಿದರು.
ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಕನಕಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ದುರ್ಗಾದಾಸ ಯಾದವ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸುರೇಶ ಗುಗ್ಗಳಶೆಟ್ರ, ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಯಾಳ, ಸದಸ್ಯರಾದ ಕೀರ್ತಿಕುಮಾರ ಸೋನಿ, ವೆಂಕಟೇಶ ಸೌದ್ರಿ, ವೀರೇಶ ಕಡಿ, ನಾಗಪ್ಪ ಕೋರೆಡ್ಡಿ, ಪ್ರಮುಖರಾದ ವೀರೇಶ ಸಮಗಂಡಿ, ಬಸನಗೌಡ ಪಾಟೀಲ, ಸೇರಿದಂತೆ ಮುಖಂಡರು, ಜನಪ್ರತಿನಿಧಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.