ಗಂಗಾವತಿ: ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳು ಸಿಗದಿರುವುದನ್ನು ಖಂಡಿಸಿ ಮಂಗಳವಾರ ನಗರದ ಕೃಷ್ಣದೇವರಾಯ ವೃತ್ತದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೇಡರೇಷನ್ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಮಂಜುನಾಥ, ‘ಕಾರ್ಮಿಕ ಇಲಾಖೆಯಡಿ ದೊರಯುವ ಶೈಕ್ಷಣಿಕ, ಮದುವೆ, ವೈದ್ಯಕೀಯ ಸಹಾಯಧನಕ್ಕೆ ಫಲಾನುಭವಿಗಳು ಅರ್ಜಿ ಸಲ್ಲಿಸಿ ವರ್ಷವಾದರೂ ಸರಿಯಾಗಿ ಸಹಾಯಧನ ಪಾವತಿಯಾಗಿಲ್ಲ. ಕಾರ್ಮಿಕರು ಕೇಳದಿದ್ದರೂ ಲ್ಯಾಪ್ಟಾಪ್, ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ (ಆಯುರ್ವೇದ) ಕಿಟ್ ಖರೀದಿಸಿ ನೂರಾರು ಕೋಟಿ ಭ್ರಷ್ಟಾಚಾರ ಎಸಗಲಾಗಿದೆ ಎಂಬ ಆರೋಪಗಳು ಕಲ್ಯಾಣ ಮಂಡಳಿ ವಿರುದ್ಧ ಕೇಳಿ ಬರುತ್ತಿದೆ. ಆದರೆ ಇಲಾಖೆ ಮಾತ್ರ ನನಗೇನೂ ಗೊತ್ತಿಲ್ಲ ಎನ್ನುವಂತೆ ವರ್ತಿಸುತ್ತಿದ್ದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
2023ರ ಶೈಕ್ಷಣಿಕ ಧನಸಹಾಯ ಅಧಿಸೂಚನೆ ರದ್ದುಪಡಿಸಿ 2022ರ ಅಧಿಸೂಚನೆ ಅನ್ವಯ ಶೈಕ್ಷಣಿಕ ಧನಸಹಾಯ ನೀಡಬೇಕು. ನೋಂದಣಿ, ಮರು ನೋಂದಣಿ ಅರ್ಜಿ ಸಲ್ಲಿಕೆಗೆ ಕಾಲಮಿತಿ ನೀಡಬೇಕು. ಪಿಂಚಣಿ ಒದಗಿಸುವ ಜೊತೆಗೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಕಾರ್ಮಿಕ ಇಲಾಖೆ ಕಚೇರಿಗೆ ಅಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಫೆಡರೇಷನ್ ಅಧ್ಯಕ್ಷ ಮುತ್ತಣ್ಣ, ಖಜಾಂಚಿ ಮಹಾದೇವ ಗೌಳಿ, ಉಪಾಧ್ಯಕ್ಷ ರಮೇಶ ಬೂದಗುಂಪ, ಸಹ ಕಾರ್ಯ ದರ್ಶಿ ಮಹೇಶ, ಕಾರ್ಮಿಕ ಮುಖಂಡರಾದ ಶಂಕರ ಸಂಗಾ ಪುರ, ಚೈತ್ರಕುಮಾರ, ಮುತ್ತಣ್ಣ ದಾಸನಾಳ, ಲಿಂಗಪ್ಪ ಕೊಜ್ಜಿ, ತಿಪ್ಪಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.