ಕೊಪ್ಪಳ: ಶಿಥಿಲಗೊಂಡು ಅವ್ಯವಸ್ಥೆಯ ಗೂಡಾಗಿದ್ದ ಇಲ್ಲಿನ ದಿಡ್ಡಿ ಓಣಿಯಲ್ಲಿರುವ ಅಂಗನವಾಡಿ ಕೇಂದ್ರವನ್ನು ಸೋಮವಾರ ಸ್ಥಳಾಂತರ ಮಾಡಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯ ಒಳನೋಟದಲ್ಲಿ ‘ಅಂಗನವಾಡಿ: ಸಮಸ್ಯೆ ನೂರು’ ತಲೆಬರಹದಲ್ಲಿ ವಿಶೇಷ ವರದಿ ಹಾಗೂ ದಿಡ್ಡಿ ಓಣಿಯ ಅಂಗನವಾಡಿಯ ಚಿತ್ರ ಪ್ರಕಟವಾಗಿತ್ತು.
ಮೇಲಧಿಕಾರಿಗಳ ಸೂಚನೆ ಮೇರೆಗೆ ಕೊಪ್ಪಳ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಗಂಧದ ಹಾಗೂ ವಲಯದ ಹಿರಿಯ ಮೇಲ್ವಿಚಾರಕಿ ಭುವನೇಶ್ವರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬೇರೆ ಕಡೆ ಇದ್ದ ಕೇಂದ್ರವನ್ನು ಎರಡು ತಿಂಗಳ ಹಿಂದೆ ಶಿಥಿಲ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಈ ಎರಡೂ ಕಟ್ಟಡಗಳ ಮಾಲೀಕರು ಒಬ್ಬರೇ ಇದ್ದು ಕೇಂದ್ರವನ್ನು ಸ್ಥಳಾಂತರ ಮಾಡಿದ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಮೇಲಧಿಕಾರಿಗೆ ಮಾಹಿತಿ ನೀಡಿರಲಿಲ್ಲ ಎನ್ನುವ ವಿಷಯವೂ ಬಹಿರಂಗವಾಗಿದೆ.
ಕೇಂದ್ರಕ್ಕೆ ತೆರಳಿದ ಅಧಿಕಾರಿಗಳು ಅಲ್ಲಿಯೇ ಬಾಲವಿಕಾಸ ಸಮಿತಿ ಸಭೆ ನಡೆಸಿ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಗೆ ದಿಡ್ಡಿಕೇರಿಯ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿದರು.
‘ದಿಡ್ಡಿಕೇರಿ ಓಣಿಯಲ್ಲಿ ನಿವೇಶನ ಗುರುತಿಸಿದ್ದು ಸದ್ಯದಲ್ಲೆ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.