ಗಂಗಾವತಿ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಕೇರಳ ಮಂಜಿಲ್ಸಾ ಫುಡ್ಟೆಕ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಭತ್ತದಲ್ಲಿ ರಾಸಾಯನಿಕ ರಹಿತ ಕೃಷಿಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ರಾಘವೇಂದ್ರ ಎಲಿಗಾರ ಮಾತನಾಡಿ,‘ಭತ್ತದ ಬೆಳೆಗಳಿಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದು, ಇದರಿಂದ ಅಕ್ಕಿ ವಿಷಪೂರಿತವಾಗಿ ಬರುತ್ತಿವೆ. ಸಾರ್ವಜನಿಕರು ಇದೇ ಅಕ್ಕಿಯನ್ನು ಸೇವಿಸಿ, ಇಲ್ಲಸಲ್ಲದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ತಡೆಗೆ ಜೈವಿಕ ನಿಯಂತ್ರಕಗಳ ಬಳಕೆ ಸೂಕ್ತ’ ಎಂದು ಹೇಳಿದರು.
ಸಸ್ಯರೋಗಶಾಸ್ತ್ರ ವಿಜ್ಞಾನಿ ರೇವತಿ ಆರ್.ಎಂ ಅವರು ಭತ್ತದಲ್ಲಿ ಸಮಗ್ರ ಕೀಟ ಮತ್ತು ರೋಗದ ನಿರ್ವಹಣೆಯ ಕುರಿತು ರೈತರಿಗೆ ಮಾಹಿತಿ ನೀಡಿದರು.
ಮಂಜಿಲ್ಸಾ ಫುಡ್ಟೆಕ್ ಪ್ರೈ.ಲಿ ಪ್ರಧಾನ ವ್ಯವಸ್ಥಾಪಕ ಅಜಿತ್ಕುಮಾರ ಕೆ., ಮಾತನಾಡಿ,‘ಸೋನಾಮಸೂರಿ ಮತ್ತು ಭತ್ತದ ನಾಡಿನ ಭಾಗದ ಆರ್.ಎನ್.ಆರ್ ಭತ್ತದ ತಳಿ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ನಾಡಗೌಡರ್ ಮಾತನಾಡಿ,‘ಭತ್ತದ ಬೆಳೆಗಳಿಗೆ ಅತಿಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಭತ್ತದ ಪ್ರಾಮುಖ್ಯತೆ ಕುಸಿಯುತ್ತಿದೆ. ರೈತರು ಕಡಿಮೆ ವೆಚ್ಚದಲ್ಲಿ ರೋಗ ಮತ್ತು ಕೀಟ ನಿರ್ವಹಣೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಮಂಜಿಲ್ಸಾ ಫುಡ್ಟೆಕ್ ಪ್ರೈ.ಲಿ ಪ್ರಧಾನ ವ್ಯವಸ್ಥಾಪಕಿ ಮೇಘನಾ ಪಾಠಕ್, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಜ್ಯೋತಿ ಆರ್, ಫಕೀರಪ್ಪ ಅರಂಭಾವಿ, ಶೃತಿ ಎನ್, ರೈತ ಮುಖಂಡ ಗಾದಿಲಿಂಗಪ್ಪ, ಬಿ.ಎಂ.ರೆಡ್ಡಿ ಸೇರಿದಂತೆ 60ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.