ಕೊಪ್ಪಳ: ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಮೇ 25 ಮತ್ತು 26ರಂದು ಮೇ ಸಾಹಿತ್ಯ ಮೇಳ ಜರುಗಲಿದೆ. ಇದೇ ವೇಳೆ ಏಳು ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
‘ಸಂವಿಧಾನ ಭಾರತ, ಧರ್ಮ ರಾಜಕಾರಣ ವಿಷಯ ಪ್ರಧಾನವಾಗಿರಿಸಿ ಈ ಬಾರಿಯ ಸಾಹಿತ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳದ ದಶಮಾನೋತ್ಸವ ಇದಾದ ಕಾರಣ ಅನೇಕ ಚಿಂತಕರು, ಹೋರಾಟಗಾರರು ಮತ್ತು ವಿಷಯ ತಜ್ಞರನ್ನು ಕರೆಯಿಸಲಾಗುವುದು’ ಎಂದು ಸಾಹಿತಿ ಬಸವರಾಜ ಸೂಳಿಬಾವಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೇಳದ ಮೊದಲ ದಿನ ಸಂವಿಧಾನ ಭಾರತ, ವರ್ತಮಾನದಲ್ಲಿ ಧರ್ಮ ರಾಜಕಾರಣ, ಬದುಕು ಹಾಡು ವಿಷಯಗಳ ಕುರಿತು ಚರ್ಚೆ; ಕವಿಗೋಷ್ಠಿ ನಡೆಯಲಿದೆ. ಎರಡನೇ ದಿನ ಚಳವಳಿ ಮತ್ತು ಧರ್ಮ ರಾಜಕಾರಣ, ನಾಳೆ ಮತ್ತು ನಾವು, ಅನುಭವ ಕಥನ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ರೈತ ಹೋರಾಟಗಾರ ರಾಕೇಶ್ ಟಿಕಾಯತ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ್ ಕಾತರಕಿ ಸೇರಿದಂತೆ ಅನೇಕರು ಮೇಳದಲ್ಲಿ ಪಾಲ್ಗೊಳ್ಳುವರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸವಿರಾಜ್ ಆನಂದ್ (ವಿಭಾ ಸಾಹಿತ್ಯ ಪ್ರಶಸ್ತಿ), ಧಾರವಾಡದ ಎಸ್.ಆರ್. ಹಿರೇಮಠ (ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ), ಉತ್ತರ ಕನ್ನಡ ಜಿಲ್ಲೆಯ ಕೆರೆಕೋಣದ ಮಾಧವಿ ಭಂಡಾರಿ (ನವಲಕಲ್ ಬ್ರಹ್ಮನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಗೌರವ), ಬೆಳಗಾವಿಯ ಶಿವಾಜಿ ಕಾಗಣೇಕರ್ (ನಿಂಗಪ್ಪ ಸಂಶಿ ರೈತಚೇತನ ಪ್ರಶಸ್ತಿ), ಮೈಸೂರಿನ ಜನಾರ್ದನ ಜನ್ನಿ (ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ), ಬೆಂಗಳೂರಿನ ಇಂದೂಧರ ಹೊನ್ನಾಪುರ (ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ ಪ್ರಶಸ್ತಿ) ಮತ್ತು ಕೊಪ್ಪಳ ತಾಲ್ಲೂಕಿನ ಕುಣಿಕೇರಿಯ ಹುಚ್ಚಮ್ಮ ಚೌಧರಿ (ಸಮಾಜಮುಖಿ ಮಹಿಳೆ) ಅವರಿಗೆ 26ರಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.