ಯಲಬುರ್ಗಾ: ‘ಎನ್ಆರ್ಎಲ್ಎಂ ಸಂಜೀವಿನಿ ಒಕ್ಕೂಟದ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢತೆ ಸಾಧಿಸಿದ್ದಾರೆ. ಅನೇಕ ಕುಟುಂಬಗಳು ಉತ್ತಮ ಜೀವನ ನಿರ್ವಹಣೆ ಮಾಡುತ್ತಿವೆ. ವಿವಿಧ ರೀತಿಯ ಪ್ರೋತ್ಸಾಹ ನೀಡುವ ಸಂಜೀವಿನಿ ಒಕ್ಕೂಟ ಮಹಿಳೆಯರ ಪಾಲಿಗೆ ಒಂದು ವರದಾನವಾಗಿದೆ’ ಎಂದು ವಲಯ ಮೇಲ್ವಿಚಾರಕ ಶರಣಪ್ಪ ಮಾದಿನೂರ ಹೇಳಿದರು.
ತಾಲ್ಲೂಕಿನ ಮಾಟಲದಿನ್ನಿ ಗ್ರಾ.ಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಲಕ್ಷ್ಮಿ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಇದರಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಿಕೊಳ್ಳಬಹುದು’ ಎಂದು ಹೇಳಿದರು.
ಸಿಬ್ಬಂದಿ ಜ್ಯೋತಿ ಪ್ರಕಾಶ ಕೋರಿ ಮಾತನಾಡಿ, ‘ಪಂಚಾಯಿತಿ ಮಟ್ಟದಲ್ಲಿ 30 ಸಂಘಗಳಿದ್ದು, ಅವುಗಳಲ್ಲಿ 29 ಸ್ವ ಸಹಾಯ ಸಂಘಗಳಿಗೆ ಒಟ್ಟಿ ₹49.05 ಲಕ್ಷ ಸಾಲ ನೀಡಲಾಗಿದೆ. ಒಟ್ಟು 350 ಜನರ ಸದಸ್ಯರಿದ್ದಾರೆ’ ಎಂದು ಮಾಹಿತಿ ನೀಡಿದರು.
ಕೆಎಚ್ಪಿಟಿ ವಲಯ ಮೇಲ್ವೀಚಾರಕಿ ಶಾರದಾ ಹಿರೇಮಠ ಮಾತನಾಡಿ, ‘ಒಕ್ಕೂಟದಲ್ಲಿ ಶಿಸ್ತುಬದ್ಧ ನಿರ್ವಹಣೆ, ಸಾಲ ವಸೂಲಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಪ್ರಮಾಣಿಕತೆಯಿಂದ ಒಕ್ಕೂಟಗಳು ನಿರ್ವಹಣೆಗೆ ಒಳಪಡುತ್ತಿರುವುದರಿಂದ ಬಹುತೇಕ ಸಂಘಗಳು ಉತ್ತಮ ಸ್ಥಿತಿಯಲ್ಲಿವೆ’ ಎಂದು ಹೇಳಿದರು.
ಗೀತಾ ಮಾಲಿಪಾಟೀಲ, ಮಂಜುಳಾ ಹಡಪದ, ಕವಿತಾ ಹಂಚಿನಾಳ, ಶಿವಮ್ಮ ಮದ್ಲಗಟ್ಟಿ, ಅಧ್ಯಕ್ಷೆ ಚನ್ನಮ್ಮ ಪೊಲೀಸ್ ಪಾಟೀಲ, ಕಾರ್ಯದರ್ಶಿ ಕಸ್ತೂರಿ ಕೋಳೂರು, ಕೆಎಚ್ಪಿಟಿ ಸುಮಿತ್ರಾ ಲೇಬಗೇರಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಗುಂಪಿನ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.