ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕೋಮುವಾದವನ್ನು ಸೋಲಿಸಿ, ದೇಶ ಉಳಿಸಿ ಸೌಹಾರ್ದ ಘೋಷಣೆ ಆಧಾರಿತ ಸಂಕಲ್ಪ ಯಾತ್ರೆ ಬುಧವಾರ ನಗರಕ್ಕೆ ಬಂದಾಗ ಇಲ್ಲಿನ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ಸ್ವಾಗತಿಸಲಾಯಿತು.
ಈಶ್ವರ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾತ್ರೆಯ ನೇತೃತ್ವ ವಹಿಸಿದ್ದ ಶ್ರೀಪಾದ ಭಟ್ಟ, ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ ಎಚ್.ಪೂಜಾರ, ಎಐಟಿಯುಸಿಐ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಜನ ಮತದಾನದ ಮೂಲಕ ತೀರ್ಪು ನೀಡುವ ಮೊದಲು ತಾವೇ ತೀರ್ಪು ನೀಡುವುದು ಸರ್ವಾಧಿಕಾರದ ಧೋರಣೆ’ ಎಂದರು.
‘ಸುಳ್ಳು ಮತ್ತು ದ್ವೇಷದ ಫ್ಯಾಕ್ಟರಿಯಿಂದ ಅನೇಕ ಸಶಸ್ತ್ರಗಳನ್ನು ಉತ್ಪಾದಿಸಿಕೊಂಡ ಬಿಜೆಪಿ 2019ರಲ್ಲಿ ಪುಲ್ವಾಮ ಘಟನೆಯನ್ನು ಮುಂಚೂಣಿಗೆ ತಂದಿತು. ಈ ಬಾರಿ ಶ್ರೀರಾಮನ ಮೂರ್ತಿ ಪ್ರತಿಸ್ಥಾಪನೆ ಸರ್ಕಾರದ ಸಾಧನೆ ಎನ್ನುವಂತೆ ಬಿಂಬಿಸಿ ಮತದಾರರನ್ನು ಮೋಡಿ ಮಾಡುತ್ತಿದೆ. ಮೋದಿ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಿಗೆ ನ್ಯಾಯಯುತವಾಗಿ ಕೊಡಬೇಕಾದ ತೆರಿಗೆ ಪಾಲಿನ ಹಣ ಕೊಡದೆ ಆರ್ಥಿಕ ಸರ್ವಾಧಿಕಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.
ಪ್ರಮುಖರಾದ ಬಸವರಾಜ ನರೇಗಲ್, ಸಂಜಯ ದಾಸ್, ಕಾಶಪ್ಪ ಚಲುವಾದಿ, ಲಿಂಗರಾಜ ಬೆಣಕಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.