ಕೊಪ್ಪಳ: ನಗರದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದ್ದು, ಜನರಲ್ಲಿ ಆತಂಕ ಮೂಡಿದೆ.
ನಗರದ ಕಿನ್ನಾಳ ರಸ್ತೆಯ ಎಫ್. ಸಿ.ಐ ಗೋದಾಮಿನ ಎದುರು ಇರುವ ಉಲ್ಲಾಸ್ ವೆಂಕಟೇಶ ರಾಯ್ಕರ್ ಅವರ ಮನೆ ಸೇರಿದಂತೆ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ.
ಉಲ್ಲಾಸ ಅವರ ಮನೆಯಲ್ಲಿ ಸುಮಾರು 50 ತೊಲೆ ಚಿನ್ನಾಭರಣ, ನಾಲ್ಕು ಕೆ, ಜಿ ಬೆಳ್ಳಿ ಹಾಗೂ ₹50 ಸಾವಿರ ನಗದು ಕಳ್ಳತನವಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಲ್ಲಾಸ ಅವರು ಇತ್ತೀಚೆಗೆ ಚಿನ್ನಾಭರಣದ ಅಂಗಡಿ ಪ್ರಾರಂಭಿಸಿದ್ದರು. ಹೊಸ ಅಂಗಡಿಯಲ್ಲಿ ಲಾಕರ್ ಇರದ ಕಾರಣ ಮನೆಯಲ್ಲಿ ಬಂಗಾರ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಇರಿಸಿದ್ದರು. ಅವರು ಊರಿಗೆ ತೆರಳಿದ್ದಾಗ ಘಟನೆ ನಡೆದಿದೆ.
ನಗರ ಠಾಣೆಯ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿನ ಬಸವ ನಗರದಲ್ಲಿ ಎರಡು ದಿನಗಳ ಹಿಂದೆಯೂ ಘಟನೆ ನಡೆದಿದ್ದು ಹತ್ತು ತೊಲೆ ಚಿನ್ನಾಭರಣ ಹಾಗೂ ₹25 ಸಾವಿರ ನಗದು ಕಳುವಾಗಿತ್ತು. ರಾಯರ ಮಠದ ಸುತ್ತಲಿನ ಮನೆಯಲ್ಲಿ ಶನಿವಾರ ಕಳ್ಳತನವಾಗಿದೆ. ಮೇಲಿಂದ ಮೇಲೆ ಕಳ್ಳತನ ನಡೆಯುತ್ತಿರುವ ಕಾರಣ ಜನ ಆತಂಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.