ಮುನಿರಾಬಾದ್: ಇಲ್ಲಿಗೆ ಸಮೀಪದ ಶಿವಪುರ ತುಂಗಭದ್ರಾ ನದಿ ತೀರದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಮತ್ತು ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶುಕ್ರವಾರ ಸಂಜೆ ಶಿವಪುರ ಮಠದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಮಹಾಶಿವರಾತ್ರಿ ಅಂಗವಾಗಿ ಅಹೋರಾತ್ರಿ ಭಜನೆ ಮತ್ತು ಜಾಗರಣೆ ನಡೆಯಿತು.
ಶನಿವಾರ ಬೆಳಿಗ್ಗೆ ಮಾರ್ಕಂಡೇಶ್ವರನಿಗೆ ಮಹಾರುದ್ರಾಭಿಷೇಕ, ಅಲಂಕಾರ, ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಜರುಗಿತು. ಸಂಜೆ ಮಹಾರಥೋತ್ಸವ ನಡೆಯಿತು. ನಗರಗಡ್ಡಿ ಮಠದ ಶಾಂತಲಿಂಗೇಶ್ವರ ಸ್ವಾಮೀಜಿ ತೇರೆಳೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಕ್ತರು ತೇರಿಗೆ ಉತ್ತತ್ತಿ ಮತ್ತು ಬಾಳೆಹಣ್ಣು ಎಸೆದು ಭಕ್ತಿ ಅರ್ಪಿಸಿದರು.
ಮಕ್ಕಳು ಬಲೂನು ಮತ್ತು ಪೀಪಿಗಳನ್ನು ಖರೀದಿಸಿ ಸಂಭ್ರಮಿಸಿದರೆ, ಯುವಕರು ಬಾಳೆಹಣ್ಣಿನ ಮೇಲೆ ಹರಕೆಯ ಸಂದೇಶ ಬರೆದು ತೇರಿಗೆ ತೂರಿದ್ದು ಕಂಡು ಬಂತು.
ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲಾ, ಉಪತಹಶೀಲ್ದಾರ್ ರೇಖಾ ದೀಕ್ಷಿತ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್ ಚಲಸಾನಿ, ಪಿಡಿಒ ಮತ್ತು ಸದಸ್ಯರು, ಶಿವಪುರ, ಅಗಳಕೇರಾ, ಹುಲಿಗಿ, ಬಂಡಿ ಹರ್ಲಾಪುರ, ಕಂಪಸಾಗರ ಸೇರಿದಂತೆ ಸುತ್ತಲಿನ ಗ್ರಾಮಗಳ ಗಣ್ಯರು, ಭಕ್ತರು ಪಾಲ್ಗೊಂಡರು. ರಥೋತ್ಸವದ ನಂತರ ಮದ್ದು ಸುಡುವ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.