ಅಳವಂಡಿ: ಜಿಲ್ಲೆಯ ವಿವಿಧ ಮಠಗಳಲ್ಲಿ ಒಂದಾಗಿರುವ ಇಲ್ಲಿನ ಸಿದ್ಧೇಶ್ವರ ಮಠ ಜನಮಾನಸದಲ್ಲಿ ಬೇರೂರಿದೆ.
ಉಜ್ಜಯಿನಿ ಪಂಚಪೀಠ ಪರಂಪರೆಗೆ ಸೇರಿದ ಇಲ್ಲಿನ ಮಠ 8ನೇ ಶತಮಾನದಲ್ಲಿ ಸ್ಥಾಪನೆಗೊಂಡಿತ್ತು. ಈ ದೇವಸ್ಥಾನ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿತ್ತು ಎನ್ನುವ ಐತಿಹ್ಯವಿದೆ.
ಹಿಂದೆ ರಾಜ ಮಹಾರಾಜರು, ಸುತ್ತಲಿನ ಗ್ರಾಮಗಳ ದೇಸಾಯಿ ಮನೆತನದವರು, ಗೌಡರು ಮರುಳಸಿದ್ದರಿಗೆ ಭಕ್ತಿಯಿಂದ ತಲೆಬಾಗಿ ಕರ್ಪೂರ ಅರ್ಪಿಸುತ್ತಿದ್ದರು. ಈ ಮೂಲಕ ತಮ್ಮ ಭಕ್ತಿ ಸಮರ್ಪಿಸಿದ್ದಾರೆ. ಶರಣರಾದ ಗೋಣಿ ಸ್ವಾಮಿ ಹಾಗೂ ಮೈಲಾರ ಲಿಂಗಪ್ಪನವರು ಮರುಳಸಿದ್ದರ ಸಮಕಾಲೀನರಾಗಿದ್ದರು. ಈಗಿನ ದೇವಸ್ಥಾನದ ಹಿಂಭಾಗದಲ್ಲಿ ಎರಡು ಗೋಣಿ ಬಸವೇಶ್ವರ ದೇವಸ್ಥಾನಗಳನ್ನು ನಿರ್ಮಿಸಿ ಗುರುಗಳ ಜೊತೆ ಸದಾ ಇರುವುದು ಇಂದಿಗೂ ಪ್ರತೀತಿ.
ಮರುಳಾರಾಧ್ಯರು ಈಗಿನ ಅಳವಂಡಿ ನೈರುತ್ಯ ದಿಕ್ಕಿನಲ್ಲಿರುವ ಸುಕ್ಷೇತ್ರದಲ್ಲಿ ಇಪ್ಪತೊಂದು ವರ್ಷಗಳ ಕಾಲ ಅನುಷ್ಠಾನ ಮಾಡಿ ಸಿದ್ದೇಶ್ವರ ಮಹಾಲಿಂಗವನ್ನು ಉದ್ದಾರ ಮಾಡಿದ್ದಾರೆ. ನಂತರ ಶಿಂಗಟಾಲೂರು ವೀರಭದ್ರಸ್ವಾಮಿಯನ್ನು ಪ್ರತಿಷ್ಠಾಪಿಸಿದ ಹಿರಿಮೆ ಮಠದ ಹಿಂದಿನ ಗುರುಗಳಿಗೆ ಸಲ್ಲುತ್ತದೆ. ಮಠದಲ್ಲಿ ರಂಭಾಪುರಿ ವೀರಗಂಗಾಧರ ಶಿವಾಚಾರ್ಯ ಶಿವಯೋಗಿಗಳು ಅನುಷ್ಠಾನ ಮಾಡಿದ ಭರದಲ್ಲಿ ಮಳೆಯನ್ನು ಅನುಗ್ರಹಿಸಿದನ್ನು ಜನ ಇಂದಿಗೂ ಮರೆತಿಲ್ಲ. ಹೀಗೆ ಭವ್ಯ ಪರಂಪರೆಯನ್ನು ಮಠ ಹೊಂದಿದೆ. ಹೊರರಾಜ್ಯದಲ್ಲಿಯೂ ಭಕ್ತರಿದ್ದಾರೆ.
ಕೀರ್ತಿ ತಂದ ಸ್ವಾಮೀಜಿ: ಮಠದ ಸದ್ಯದ ಪೀಠಾಧಿಪತಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಮ್ಮ ಕ್ರಿಯಾಶೀಲತೆ ಮೂಲಕ ಮಠಕ್ಕೆ ಕೀರ್ತಿ ಹೊಸ ಕಳೆ ತಂದಿದ್ದಾರೆ.
ಮೂಲತಃ ಅವರೇ ಯೋಗಪಟುಗಳಾಗಿದ್ದು ಆಧ್ಯಾತ್ಮದತ್ತ ಒಲವು ತೋರಿಸುತ್ತಾ ಸಾಧಕರ ನಿರ್ಮಾಣ ಕೇಂದ್ರ ಶಿವಯೋಗಿ ಮಂದಿರದಲ್ಲಿ ಅಷ್ಟಾಂಗ ಯೋಗ ಧ್ಯಾನ ಕೈಗೊಂಡಿದ್ದಾರೆ. ಜ್ಯೋತಿಷ್ಯ, ವೇದ, ಶಾಸ್ತ್ರಗಳ ಅಧ್ಯಯನ ಮಾಡಿದ್ದಾರೆ.
ಸಿದ್ಧೇಶ್ವರ ಕ್ಷೇತ್ರವು ಶರಣರು ಸಂತರು ಹಾಗೂ ತ್ಯಾಗಿಗಳು ನಡೆದಾಡಿದ ಪುಣ್ಯಕ್ಷೇತ್ರವಾಗಿದೆ. ಶ್ರೀಮಠದ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.
ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಳವಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.