ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ 486 ವಿದ್ಯಾರ್ಥಿಗಳು ಗೈರು

ವಿದ್ಯಾರ್ಥಿಗಳ ಮೇಲೆ ಕ್ಯಾಮೆರಾ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 15:20 IST
Last Updated 25 ಮಾರ್ಚ್ 2024, 15:20 IST
ಕೊಪ್ಪಳದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಕೆ.ಎಸ್‌. ಗುಲಾಬಿ ಹೂ ನೀಡಿ ಸ್ವಾಗತಿಸಿದರು
ಕೊಪ್ಪಳದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಕೆ.ಎಸ್‌. ಗುಲಾಬಿ ಹೂ ನೀಡಿ ಸ್ವಾಗತಿಸಿದರು    

ಕೊಪ್ಪಳ: ಜಿಲ್ಲೆಯ 75 ಕೇಂದ್ರಗಳಲ್ಲಿ ಸೋಮವಾರ ಆರಂಭವಾದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನ 486 ವಿದ್ಯಾರ್ಥಿಗಳು ಗೈರಾದರು. ಪರೀಕ್ಷೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ನಡೆಯಿತು.

ಗಂಗಾವತಿ ಶೈಕ್ಷಣಿಕ ತಾಲ್ಲೂಕಿನಲ್ಲಿ 8,114, ಕೊಪ್ಪಳ ತಾಲ್ಲೂಕಿನಲ್ಲಿ 7,064, ಕುಷ್ಟಗಿ 5,099 ಮತ್ತು ಯಲಬುರ್ಗಾ 5,204 ಸೇರಿ ಒಟ್ಟು 25,481 ವಿದ್ಯಾರ್ಥಿಗಳು ಹೆಸರು ನೋಂದಾವಣೆ ಮಾಡಿಕೊಂಡಿದ್ದರು. ಇದರಲ್ಲಿ ಗಂಗಾವತಿ ವ್ಯಾಪ್ತಿಯಲ್ಲಿ 153, ಕೊಪ್ಪಳ 167, ಕುಷ್ಟಗಿ 95 ಮತ್ತು ಯಲಬುರ್ಗಾ ಶೈಕ್ಷಣಿಕ ತಾಲ್ಲೂಕು ವ್ಯಾಪ್ತಿಯಲ್ಲಿ 71 ವಿದ್ಯಾರ್ಥಿಗಳು ತಮ್ಮ ಮೊದಲ ವಿಷಯದ ಪರೀಕ್ಷೆಗೆ ಹಾಜರಾಗಲಿಲ್ಲ.

ಪರೀಕ್ಷೆಯಲ್ಲಿ ನಕಲು ಮತ್ತು ಗೊಂದಲಕ್ಕೆ ಅವಕಾಶವಿಲ್ಲದಂತೆ ಕ್ರಮ ವಹಿಸಲು ಇದೇ ಮೊದಲ ಬಾರಿಗೆ ವೆಬ್‌ ಕಾಸ್ಟಿಂಗ್‌ ಸೌಲಭ್ಯದ ಮೂಲಕ ಕಣ್ಗಾವಲು ವಹಿಸಲಾಗಿತ್ತು. ಪ್ರತಿ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ಲಿಂಕ್‌ ಡಿಡಿಪಿಐ ಮತ್ತು ಬಿಇಒ ಕಚೇರಿಗಳಲ್ಲಿ ನಿರ್ವಹಣೆ ಮಾಡಲಾಗಿತ್ತು. ಲಿಂಕ್‌ ಇದ್ದರೆ ಎಲ್ಲಿಯಾದರೂ ಇದ್ದುಕೊಂಡು ವಿಡಿಯೊ ವೀಕ್ಷಿಸಬಹುದು. ಹೀಗಾಗಿ ಈ ಬಾರಿ ನಕಲಿಗೆ ಎಲ್ಲಿಯೂ ಅವಕಾಶವಿರಲಿಲ್ಲ.

ADVERTISEMENT

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಅವರು ತಳಕಲ್‌, ಇಟಗಿಯ ಆದರ್ಶ ವಿದ್ಯಾಲಯ, ಕುಕನೂರಿನ ಗವಿಸಿದ್ಧೇಶ್ವರ ಹೈಸ್ಕೂಲು, ಕೊಪ್ಪಳದ ಎಸ್‌ಎಫ್‌ಎಸ್‌ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಕೆ.ಎಸ್‌. ಅವರು ಮಕ್ಕಳಿಗೆ ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿದರು. ಯಾವ ಒತ್ತಡಕ್ಕೂ ಒಳಗಾಗದೇ ಪರೀಕ್ಷೆ ಬರೆಯಿರಿ ಎಂದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.