ಯಲಬುರ್ಗಾ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಕಾತ್ರಾಳ ಗ್ರಾಮದ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ಹಾರಿ ಹೋದ ತಗಡು ಹಾಗೂ ರಾಡ್ ಕಾರಿನಲ್ಲಿದ್ದ ವ್ಯಕ್ತಿಗೆ ಬಲವಾಗಿ ಹೊಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾಧಾರಣ ಮಳೆ ಮತ್ತು ಜೋರು ಗಾಳಿ ಬೀಸುತ್ತಿತ್ತು. ಕಾರಿನಲ್ಲಿದ್ದವರು ಅಲ್ಲಿಯೇ ಇದ್ದ ಭಾರತ್ ಡಾಬಾದಲ್ಲಿ ಊಟಕ್ಕೆ ಹೋಗಿದ್ದಾಗ ಈ ಅವಘಡ ನಡೆದಿದೆ. ಕಾರು ಚಾಲಕ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಖಾದರಸಾಬ್ ಬವುಕಾನ್ (50) ಕಾರಿನಲ್ಲಿಯೇ ಕುಳಿತಿದ್ದರು. ಅವರಿಗೆ ರಾಡು ಜೋರಾಗಿ ಬಡಿದಿದೆ.
ಗಾಳಿಯ ವೇಗಕ್ಕೆ ಡಾಬಾದ ತಗಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಡಾಬಾದ ಒಳಗಡೆ ಇದ್ದ ಆರು ಜನರಿಗೂ ಗಾಯಗಳಾಗಿವೆ. ಇವರೆಲ್ಲರೂ ಬಾದಾಮಿಯವರು. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ನಗರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಬಿರುಗಾಳಿಗೆ ಕೆಲವು ಕಡೆ ಮನೆಯ ಪತ್ರಾಸ್ ಹಾರಿವೆ. ಹುಣಸಗಿ ತಾಲ್ಲೂಕಿನ ಅರಕೇರಾ ಜೆ. ಗ್ರಾಮದಲ್ಲಿ ಗಾಳಿಮಳೆಗೆ ದೊಡ್ಡ ಮರ ಉರುಳಿ ಬಿದ್ದು ಮೂರು ಗಂಟೆ ಸಂಚಾರ ಸ್ಥಗಿತಗೊಂಡಿತ್ತು.
ಕಲಬುರಗಿ ನಗರದಲ್ಲಿ ಸಂಜೆ ಕೆಲ ಕಾಲ ಗುಡುಗು ಸಹಿತ ಉತ್ತಮವಾಗಿ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.