ಗಂಗಾವತಿ: ಮೊಬೈಲ್ ಬಳಕೆ ಕಡಿಮೆ ಮಾಡಿ, ಓದಿನ ಕಡೆ ಹೆಚ್ಚಿನ ಗಮನ ನೀಡುವಂತೆ ತಂದೆ-ತಾಯಿ ಬುದ್ದಿವಾದ ಹೇಳಿದಕ್ಕೆ ಮನನೊಂದು ಯುವಕನೊಬ್ಬ ಗಂಗಾವತಿ ತಾಲ್ಲೂಕಿನ ಸಾಣಾಪುರ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಗಂಗಾವತಿ ಜಯನಗರದ ಸಿದ್ದಾಪುರ ಬಡಾವಣೆ ನಿವಾಸಿ ರಾಹುಲ್ ನಾಗೇಶ ಟೆಂಗಿನಕಾಯಿ (18) ಆತ್ಮಹತ್ಯೆ ಮಾಡಿಕೊಂಡ ಯುವಕ.
ಯುವಕ ರಾಹುಲ್ ಬೇಥಲ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ. ಪಾಲಕರು ಮೊಬೈಲ್ ಬಳಕೆ ಬಿಟ್ಟು ಶಿಕ್ಷಣದ ಕಡೆ ಗಮನಹರಿಸುವಂತೆ ಬುದ್ಧಿವಾದ ಹೇಳಿದ್ದರು.
ಈ ವಿಷಯಕ್ಕೆ ರಾಹುಲ್ ಮೂರು ದಿನಗಳ ಹಿಂದೆಯೇ ಮನೆ ತೊರೆದಿದ್ದ. ಗಾಬರಿಗೊಂಡ ಪಾಲಕರು ಗಂಗಾವತಿ ನಗರಠಾಣೆಯಲ್ಲಿ ಜೂ.11ರಂದು ಪತ್ತೆಗಾಗಿ ದೂರು ಸಲ್ಲಿಸಿದ್ದರು.
ಬುಧವಾರ ಬೆಳಿಗ್ಗೆ ಸಾಣಾಪುರ ಕೆರೆಯಲ್ಲಿ ರಾಹುಲ್ ಮೃತದೇಹ ಪತ್ತೆಯಾಗಿದೆ. ಹರಿಗೋಲು ಸವಾರರ ಸಹಾಯದಿಂದ ಮೃತದೇಹ ಹೊರತಂದು, ಮುಂದಿನ ಪ್ರಕ್ರಿಯೆಗೆ ಗಂಗಾವತಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.