ADVERTISEMENT

ಭಕ್ತರಿಗೆ ಲೆಕ್ಕ ನೀಡದ ಸ್ವಾಮೀಜಿ; ಆರೋಪ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:55 IST
Last Updated 28 ಸೆಪ್ಟೆಂಬರ್ 2024, 15:55 IST

ಕೊಪ್ಪಳ: ‘ಯಲಬುರ್ಗಾದ ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಮಠದ ಆಸ್ತಿಯ ಬಗ್ಗೆ ಯಾರಿಗೂ ಲೆಕ್ಕ ನೀಡಿಲ್ಲ. ಇದರ ಮಾಹಿತಿಯೂ ಇಲ್ಲ’ ಎಂದು ಮಠದ ಭಕ್ತ ಪ್ರಕಾಶ ಬೇಲೇರಿ ಆರೋಪಿಸಿದರು.

‘ಸಿದ್ದರಾಮೇಶ್ವರ ಸ್ವಾಮೀಜಿ ಮಠವು ಭಕ್ತರಿಗೆ ಸೇರಿದ್ದಲ್ಲ. ಮಠದ ಆಸ್ತಿಯನ್ನು ಯಾರಿಗಾದರೂ ಮಾರಾಟ ಮಾಡಬಹುದು ಎಂದಿದ್ದಾರೆ. ಇದು ಸನ್ಯಾಸಿಗಳ ಮಠವಾಗಿದ್ದು ಈಗಿನ ಸ್ವಾಮೀಜಿ ತಮ್ಮ ಕುಟುಂಬಕ್ಕೆ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಮಠಕ್ಕೆ 250 ಎಕರೆ ಭೂಮಿಯಿದ್ದು, ಪೂರ್ವಾಶ್ರಮದ ಸಂಬಂಧಿಕರಿಗೆ ಆಸ್ತಿ ಪರಾಭಾರೆ ಮಾಡುತ್ತಿದ್ದಾರೆ. ಮಠದ ಆಸ್ತಿಯನ್ನು ತಮ್ಮದೇ ಆಸ್ತಿ ಎನ್ನುವಂತೆ ಮಾಡಿಕೊಂಡಿದ್ದಾರೆ. ಈಗಿನ ಪೀಠಾಧಿಪತಿಗಳು ತಮ್ಮ ಅಧಿಕಾರ ಬಿಟ್ಟುಕೊಡಬೇಕು. ಈಗಿನ ಹಾಗೂ ಮಠದ ಹಿಂದಿನ ಪೀಠಾಧಿಪತಿಗಳಿಗೂ ಸಂಬಂಧವೇ ಇಲ್ಲ. ಅವರನ್ನು ನೇಮಕ ಮಾಡಿದ್ದು ಶ್ರೀಶೈಲ ಪೀಠದವರು ಹಾಗೂ ಭಕ್ತರು’ ಎಂದರು.  

ADVERTISEMENT

‘ಆಸ್ತಿ ಪರಭಾರೆ ಮಾಡಿರುವ ವಿಷಯವನ್ನು ಭಕ್ತರು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಹೋರಾಟ ಮಾಡಲಾಗುತ್ತದೆ. ಕಳೆದ ವರ್ಷವೇ ಎಲ್ಲ ಆಸ್ತಿಯನ್ನು ಸಹೋದರರ ಹೆಸರಿಗೆ ವರ್ಗಾಯಿಸಿದ್ದಾರೆ. ಮಠದ ಸುಮಾರು 72 ಎಕರೆ ಭೂಮಿಯನ್ನು ತಮ್ಮ ಸಹೋದರರಿಗೆ ನೀಡಿದ್ದಾರೆ’ ಎಂದು ಆರೋಪಿಸಿದರು. 

ವೀರನಗೌಡ ಬನ್ನಪ್ಪಗೌಡರ, ಶಿವಪ್ಪ ಹಡಪದ, ಶರಣಪ್ಪ ಅರಕೇರಿ, ಬಸವರಾಜ ನಡುವಲಮನಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.