ಕುಕನೂರು: ಕಲ್ಲೂರು ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನದ ಹುಂಡಿ ಹಣ ಕಳ್ಳತನವಾಗಿ ನಾಲ್ಕು ದಿನಗಳಾದರು ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಬುಧವಾರ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಮಾಜಿ ಸದಸ್ಯ ಕಲ್ಲಿನಾಥಯ್ಯ ಜಾರಗಡ್ಡಿಮಠ ಮಾತನಾಡಿ, ಏ.26ರಂದು ಕಲ್ಲೂರು ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನದ ಹುಂಡಿ ಹಣ ₹ 1 ಲಕ್ಷಕ್ಕಿಂತಲು ಅಧಿಕ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಡುತ್ತದೆ. ವರ್ಷದಲ್ಲಿ ಎರಡು ಬಾರಿ ದೇವಸ್ಥಾನದ ಹುಂಡಿ ಹಣವನ್ನು ಎಣಿಕೆ ಮಾಡಲಾಗುತ್ತಿತ್ತು.₹ 6 ರಿಂದ 7ಲಕ್ಷ ವರ್ಷಕ್ಕೆ ಜಮಾವಾಗುತ್ತದೆ. ಇದನ್ನು ಗಮನಿಸಿದ ಕೆಲವರು, ಕಳ್ಳರ ವೇಷದಲ್ಲಿ ಬಂದು ಹುಂಡಿಯ ಬೀಗ ತೆಗೆದು ಕಳ್ಳತನ ಮಾಡಿದ್ದಾರೆ. ಹುಂಡಿ ಬೀಗದ ಕಿಲಿ ತಹಶೀಲ್ದಾರ್ ಬಳಿ ಇರಬೇಕು. ಆದರೆ, ಒಂದು ನಕಲಿ ಕಿಲಿಯನ್ನು ಯಾರೋ ಮಾಡಿಸಿಕೊಂಡು ಇಂತಹ ಕೃತ್ಯ ಎಸಗಿದ್ದಾರೆ. ಹುಂಡಿ ಹಣ ಕಳ್ಳತನವಾಗಿ ನಾಲ್ಕು ದಿನಗಳಾದರು ತಹಶೀಲ್ದಾರ್, ದೇವಸ್ಥಾನದ ಕಮೀಟಿಯ ಅಧ್ಯಕ್ಷರು, ಸದಸ್ಯರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದಾರೆ ಎಂದರು.
ತಹಶೀಲ್ದಾರ್ ಖಾತೆಯಲ್ಲಿ ದೇವಸ್ಥಾನದ ₹ 1 ಕೋಟಿಗೂ ಅಧಿಕ ಹಣ ಇದೆ. ಆದರೆ, ದೇವಸ್ಥಾನದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಶೌಚಾಲಯ, ಸ್ನಾನದ ಗೃಹಗಳು, ಸಿಸಿ ಕ್ಯಾಮೆರಾಗಳು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಭದ್ರತೆಗೆ ಹೊಂಗಾರ್ಡ್ ಇಲ್ಲವಾಗಿದ್ದರಿಂದ ಇಂತಹ ಸಮಸ್ಯೆಗಳು ದೇವಸ್ಥಾನಕ್ಕೆ ಆಗುತ್ತಿವೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ದೇವಸ್ಥಾನದ ಸಮಸ್ಯೆದ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದರು.
ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯಾಧ್ಯಕ್ಷ ಶಂಕರ ಹೂಗಾರ, ಗ್ರಾ.ಪಂ ಅಧ್ಯಕ್ಷ ನಾಗಯ್ಯ ಗುರುಮಠ, ಬಸವರಾಜ ಮ್ಯಾಗೇರಿ, ಸಣ್ಣನೀಲಪ್ಪ ತೊಂಡಿಹಾಳ, ಬಸವರಾಜ ತಳವಾರ, ಮಂಜುನಾಥ ಕುದರಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.