ಕಾರಟಗಿ: ಅರಣ್ಯ ಇಲಾಖೆಯ ಚಿಣ್ಣರ ವನ ದರ್ಶನ ಯೋಜನೆಯಡಿ ಆಯ್ಕೆಯಾದ ತಾಲ್ಲೂಕಿನ ಬೆನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 2 ದಿನದ ಪ್ರವಾಸದ ನಿಮಿತ್ತ ಗುರುವಾರ ಪ್ರವಾಸಕ್ಕೆ ತೆರಳಿದರು.
ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ ರಾಠೋಡ ಮಾತನಾಡಿ, ‘ಅರಣ್ಯ ಸಂಪತ್ತು, ವನ್ಯಜೀವಿ, ಸಂಕುಲಗಳ ಮತ್ತು ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗಾಗಿ ಹೇಗೆ ಉಳಿಸಿಕೊಳ್ಳಬೇಕು ಎಂಬ ಅರಿವು ಮೂಡಿಸಲು ಪ್ರವಾಸ ಕಾರ್ಯಕ್ರಮ ಕೈಗೊಳ್ಳಲಾಗಿದೆ. 6ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 2 ದಿನದ ಪ್ರವಾಸದ ಸಮಯದಲ್ಲಿ ಊಟ, ವಸತಿ ವ್ಯವಸ್ಥೆಯನ್ನು ಅರಣ್ಯ ಇಲಾಖೆ ವಹಿಸಲಿದೆ.
ಗಂಗಾವತಿ ವಲಯ ಕಚೇರಿ, ವಡ್ಡರಹಟ್ಟಿ ಸಸ್ಯ ಕ್ಷೇತ್ರ, ಕೊಪ್ಪಳ ತಾಲ್ಲೂಕಿನ ರುದ್ರಪುರ ಸಾಲಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ಭೇಟಿ ನೀಡಲಾಗುವುದು. ಶುಕ್ರವಾರ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ, ಪಂಪಾವನ ಮುನಿರಾಬಾದ್, ತುಂಗಭದ್ರಾ ಉದ್ಯಾನವಕ್ಕೆ ಭೇಟಿ ನೀಡಲಾಗುವುದು. ಇದಲ್ಲದೇ ಮಕ್ಕಳಿಗೆ ಬಂದೂಕು ಬಳಸುವ ರೀತಿ, ಪ್ರಾಣಿಗಳು ಸೆರೆ ಹಿಡಿಯುವ, ಸಸ್ಯಗಳ ನಾಟಿ, ಪ್ರಾಣಿಗಳ ದಾಳಿಯಿಂದ ರಕ್ಷಣೆ, ಮರಗಳ್ಳತನ ಪತ್ತೆ ಹಚ್ಚುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದರು.
ಮುಖ್ಯಶಿಕ್ಷಕ ಪ್ರಕಾಶ ಎಸ್.ಎಲ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.