ADVERTISEMENT

ಅಯೋಧ್ಯೆಗೆ ರೈಲು; ಒಂದು ವಾರದಲ್ಲಿ ನಿರ್ಧಾರ

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಜತೆ ಸಂಸದ ಸಂಗಣ್ಣ ಕರಡಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 8:42 IST
Last Updated 10 ಜನವರಿ 2024, 8:42 IST
ಕೊಪ್ಪಳ ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳ ಬಗ್ಗೆ ಸಂಸದ ಸಂಗಣ್ಣ ಕರಡಿ ರೈಲ್ವೆ ಅಧಿಕಾರಿಗಳ ಜತೆ ಚರ್ಚಿಸಿದರು
ಕೊಪ್ಪಳ ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳ ಬಗ್ಗೆ ಸಂಸದ ಸಂಗಣ್ಣ ಕರಡಿ ರೈಲ್ವೆ ಅಧಿಕಾರಿಗಳ ಜತೆ ಚರ್ಚಿಸಿದರು   

ಕೊಪ್ಪಳ: ಅಯೋಧ್ಯೆಯಲ್ಲಿ ಇದೇ 22ರಂದು ರಾಮಮಂದಿರ ಉದ್ಘಾಟನೆ ನಡೆಯಲಿದ್ದು ಹನುಮನ ನಾಡು ಗಂಗಾವತಿಯಿಂದ ಆಯೋಧ್ಯೆಗೆ ನೇರ ರೈಲು ಓಡಿಸುವ ಪ್ರಸ್ತಾವದ ಬಗ್ಗೆ ಒಂದು ವಾರದಲ್ಲಿ ನಿರ್ಧಾರವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಕೊಪ್ಪಳ ಲೋಕಸಭಾ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಲೋಕಾರ್ಪಣೆ ಸಂಬಂಧಿಸಿ ಹಲವು ವಿಷಯಗಳ ಕುರಿತು ಮಂಗಳವಾರ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಜೊತೆ ಅವರು ಚರ್ಚಿಸಿದ್ದಾರೆ.

ಬಳಿಕ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ‘ಅಯೋಧ್ಯಕ್ಕೆ ವಿಶೇಷ ರೈಲು ಸಂಚರಿಸಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದ್ದು, ರೈಲ್ವೆ ಅಧಿಕಾರಿಗಳು ತಾಂತ್ರಿಕವಾಗಿ ಪರಿಶೀಲಿಸುತ್ತಿದ್ದಾರೆ. ವಾರದೊಳಗೆ ಮತ್ತೊಂದು ಸಭೆ ಇದ್ದು, ಬಳಿಕ ನಿರ್ಧಾರವಾಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಗದಗ-ವಾಡಿ ರೈಲು ಮಾರ್ಗದಲ್ಲಿ ಕುಷ್ಟಗಿವರೆಗೆ ರೈಲು ಓಡಿಸುವುದು, ಗಿಣಿಗೇರಾ-ರಾಯಚೂರು ರೈಲು ಮಾರ್ಗದ ಕಾರಟಗಿಯಿಂದ ಸಿಂಧನೂರು ಸಂಚಾರ ತಿಂಗಳೊಳಗೆ ಆರಂಭವಾಗುವ ನಿರೀಕ್ಷೆಯಿದೆ. ಹುಲಿಗೆ ಮುನಿರಾಬಾದ್ ಮೇಲ್ಸೇತುವೆಗೆ ಭೂಮಿಪೂಜೆ ಅಡಿಗಲ್ಲು ಸಮಾರಂಭ ಶೀಘ್ರದಲ್ಲಿಯೇ ನಡೆಯಲಿದೆ’ ಎಂದು ತಿಳಿಸಿದರು.

‘ಗಿಣಿಗೇರಾ ಮೇಲ್ಸೇತುವೆ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದ್ದು, ಶೀಘ್ರವೇ ಲೋಕಾರ್ಪಣೆ ಮಾಡಲಾಗುವುದು’ ಎಂದಿದ್ದಾರೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮಾಜಿ ಅಧ್ಯಕ್ಷ ಅನಿಲ್ ಸಹಸ್ರಬುದ್ದಿ, ಸಂತೋಷ್ ಕೆಲೋಜಿ, ನರಸಿಂಗರಾವ್ ಕುಲಕರ್ಣಿ, ಸಿದ್ದರಾಮ ಸ್ವಾಮಿ, ವಿರೂಪಾಕ್ಷಸ್ವಾಮಿ ಇದ್ದರು. ಇದೇ ವೇಳೆ ಸಂಗಣ್ಣ ಕರಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.