ADVERTISEMENT

ತುಂಗಭದ್ರಾ ಜಲಾಶಯ: ಉಳಿದ ನಾಲ್ಕು ಎಲಿಮೆಂಟ್‌ ಆ. 17ರಂದು ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 16:51 IST
Last Updated 16 ಆಗಸ್ಟ್ 2024, 16:51 IST
   

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ 19ನೇ ಗೇಟ್‌ಗೆ ಮೊದಲ ಎಲಿಮೆಂಟ್‌ ಅಳವಡಿಕೆ ಯಶಸ್ವಿಯಾಗಿದ್ದು, ಇನ್ನುಳಿದ ನಾಲ್ಕು ಎಲಿಮೆಂಟ್‌ಗಳನ್ನು ಶನಿವಾರ ಬೆಳಿಗ್ಗೆ 6 ಗಂಟೆಯಿಂದಲೇ ಅಳವಡಿಸುವ ಕಾರ್ಯಾಚರಣೆ ಮುಂದುವರಿಯಲಿದೆ.

ತೋರಣಗಲ್‌ನ ಜಿಂದಾಲ್‌, ಹೊಸಪೇಟೆಯ ನಾರಾಯಣ ಮತ್ತು ಕೊಪ್ಪಳ ತಾಲ್ಲೂಕಿನ ಹಿಂದೂಸ್ತಾನ್ ಕಂಪನಿಗಳು ಈ ಎಲಿಮೆಂಟ್‌ಗಳನ್ನು ತಯಾರಿಸಿವೆ. ಇದೇ ಕಂಪನಿಗಳ ಕಾರ್ಮಿಕರು, ತಜ್ಞರು ಮತ್ತು ಎಂಜಿನಿಯರ್‌ಗಳು ಮೊದಲ ಎಲಿಮೆಂಟ್‌ ಅಳವಡಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಕಾರ್ಯಾಚರಣೆ ಯಶಸ್ವಿಯಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ‘ಮೂರೂ ಕಂಪನಿಗಳ ಸಿಬ್ಬಂದಿ, ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಕನ್ನಯ್ಯ ನಾಯ್ಡು ಅವರ ಶ್ರಮದಿಂದಾಗಿ ಮೊದಲ ಪ್ರಯತ್ನದಲ್ಲಿಯೇ ಎಲಿಮೆಂಟ್‌ ಅಳವಡಿಕೆ ಸಾಧ್ಯವಾಯಿತು’ ಎಂದು ಹರ್ಷ ವ್ಯಕ್ತಪಡಿದರು.

ADVERTISEMENT

‘ಹರಿಯುವ ನೀರಿನಲ್ಲಿ ಕಾರ್ಯಾಚರಣೆ ನಡೆಸಿದ್ದು ನಿಜಕ್ಕೂ ದೊಡ್ಡ ಸಾಧನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೈವ್ ಆಗಿ ಕಾರ್ಯಚರಣೆ ವೀಕ್ಷಿಸಿದ್ದಾರೆ. ಉಳಿನ ನಾಲ್ಕು ಎಲಿಮೆಂಟ್‌ಗಳ ಅಳವಡಿಕೆ ಕಾರ್ಯ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ನಮ್ಮ ನಿರೀಕ್ಷೆಗಿಂತಲೂ ಹೆಚ್ಚು ನೀರು ಜಲಾಶಯದಲ್ಲಿಯೇ ಉಳಿದಿದೆ’ ಎಂದರು.

‘ಆರಂಭದಲ್ಲಿ ಆತಂಕವಿತ್ತು. ಹರಿಯುವ ನೀರಿನಲ್ಲಿ ಮಾಡಿದ ಕೆಲಸ ಪ್ಲ್ಯಾನ್‌ ಎ ಫಲ ನೀಡಿದೆ. ನಾಳೆ ಇನ್ನೊಂದು ಎಲಿಮೆಂಟ್‌ ಇಳಿಸಿದ ಬಳಿಕ ನೀರು ಬಿಡುವ ಪ್ರಮಾಣ ಕಡಿಮೆ ಮಾಡಲಾಗುತ್ತದೆ. ಒಳಹರಿವು ಹೆಚ್ಚಾಗುತ್ತದೆ. ಮುಖ್ಯಮಂತ್ರಿಯೇ ಬಂದು ಬಾಗಿನ ಅರ್ಪಿಸುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.