ಕುಷ್ಟಗಿ: ‘ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಮಕ್ಕಳ ಜ್ಞಾನಾರ್ಜನೆ ಹೆಚ್ಚಿಸುವ ಶಿಕ್ಷಕರು, ಶಿಕ್ಷಣ ಇಲಾಖೆಯ ಮೂಲಕ ಸಮಾಜಕ್ಕೆ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ. ಜಗದೀಶಪ್ಪ ಹೇಳಿದರು.
ಜೂನ್ ತಿಂಗಳವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಇಲ್ಲಿಯ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಕರ ಬಗ್ಗೆ ಸಮುದಾಯ ಹೊಂದಿರುವ ಕೃತಜ್ಞತಾ ಭಾವನೆ ಸದಾಕಾಲದವರೆಗೂ ಮುಂದುವರಿಯಬೇಕೆಂದರೆ ಶಿಕ್ಷಕರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಹೇಳಿದರು.
ಉಪನ್ಯಾಸಕ ನಾಗರಾಜ ಹೀರಾ ಮಾತನಾಡಿ, ‘ನೌಕರರ ಜೀವನ ಆರಂಭಗೊಳ್ಳುವುದೇ ನಿವೃತ್ತಿ ನಂತರ. ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಕುಟುಂಬ ಸದಸ್ಯರು, ಸಮಾಜದೊಂದಿಗೆ ಅನೋನ್ಯ ಸಂಬಂಧ ಬೆಳೆಸಿಕೊಳ್ಳಬೇಕು’ ಎಂದರು.
ಲೋಕಾಯುಕ್ತ ನಿವೃತ್ತ ಕಾನ್ಸ್ಟೆಬಲ್ ಶಿವಪುತ್ರಪ್ಪ ವಂದಾಲಿ, ದೈಹಿಕ ಶಿಕ್ಷಣಾಧಿಕಾರಿ ಸರಸ್ವತಿ, ಅಕ್ಷರ ದಾಸೋಹ ಯೋಜನೆಯ ಕೆ. ಶರಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಲಕ್ಷ್ಮಣ ಪೂಜಾರ, ನಿಂಗಪ್ಪ ಗುನ್ನಾಳ, ಗುರಪ್ಪ ಕುರಿ, ಶಿವಪ್ಪ ವಾಗ್ಮೋರೆ, ನಿವೃತ್ತ ಶಿಕ್ಷಕರಾದ ನಂದಲಾಲ್, ದೇವರಾಯ ಬಡಿಗೇರ, ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಹೈದರಲಿ ಜಾಲಿಹಾಳ ಇತರರು ಮಾತನಾಡಿದರು.
27 ನಿವೃತ್ತ ಶಿಕ್ಷಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಸಿದ್ರಾಮಪ್ಪ ಅಮರಾವತಿ ಸೇರಿ ಅನೇಕ ಶಿಕ್ಷಕರು ಹಾಜರಿದ್ದರು. ಗೌರಮ್ಮ ತಳವಾರ ನಿರೂಪಿಸಿದರು. ರುದ್ರೇಶ ಬೂದಿಹಾಳ ಸ್ವಾಗತಿಸಿದರೆ, ಯಮನಪ್ಪ ಲಮಾಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.