ಕನಕಗಿರಿ: ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿರುವ ದರೋಜಿ- ಬಾಗಲಕೋಟೆ ಹೊಸ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟು ಯೋಜನೆ ಕಾರ್ಯಗತಗೊಳಿಸಬೇಕು ಎಂದು ದರೋಜಿ- ಗಂಗಾವತಿ ಬಾಗಲಕೋಟೆ ರೈಲ್ವೆ ಹೋರಾಟ ಸಮಿತಿ ಸಹ ಸಂಚಾಲಕ ದುರ್ಗಾದಾಸ ಯಾದವ ಆಗ್ರಹಿಸಿದ್ದಾರೆ.
‘ಇಲ್ಲಿನ ಜನರ ಒತ್ತಾಸೆಗೆ ಮಾಜಿ ಸಂಸದ ಕರಡಿ ಸಂಗಣ್ಣ ಅವರು ಸ್ಪಂದಿಸಿ, ರೈಲ್ವೆ ಯೋಜನೆ ಆರಂಭಿಸಲು ಅನುದಾನ ಕೊಡಿಸಿ ಈಗಾಗಲೆ ಸರ್ವೇ ಮಾಡಿಸಿದ್ದಾರೆ. ಜುಲೈ 23ರಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದ್ದು ನೂತನ ಸಂಸದ ಕೆ.ರಾಜಶೇಖರ ಹಿಟ್ನಾಳ್ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಕಾಮಗಾರಿಗೆ ಅನುಮೋದನೆ ನೀಡಿ ಅನುದಾನ ತರಬೇಕು’ ಎಂದು ಒತ್ತಾಯಿಸಿದ್ದಾರೆ.
ಹೊಸ ರೈಲ್ವೆಯು ದರೋಜಿಯಿಂದ ಆರಂಭವಾಗಿ ಗಂಗಾವತಿ, ಕನಕಗಿರಿ, ತಾವರಗೇರಾ, ಕುಷ್ಟಗಿ, ಇಲಕಲ್ , ಹುನಗುಂದ ಮಾರ್ಗವಾಗಿ ಬಾಗಲಕೋಟೆ ತಲುಪುತ್ತದೆ. ಈ ರೈಲ್ವೆ ಯೋಜನೆ ಆರಂಭವಾದರೆ ವರ್ತಕರು, ರೈತರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ. ಆದಷ್ಟು ಬೇಗನೆ ಅನುದಾನ ನೀಡಿ ಭೂಮಿ ಪೂಜೆ ನೆರವೇರಿಸಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ.
ಪ್ರಮುಖರಾದ ನಾರಾಯಣಪ್ಪ, ಮೃತ್ಯುಂಜಯ ಸ್ವಾಮಿ ಭೂಸನೂರು ಮಠ, ರಂಗಪ್ಪ ಕುರುಬರ ಇತರರು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.