ADVERTISEMENT

ಆನೆಗೊಂದಿ | ಪರವಾನಗಿ ಇಲ್ಲದೇ ಉತ್ಸವಕ್ಕೆ ಮೈದಾನ ಬಳಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 14:56 IST
Last Updated 7 ಮಾರ್ಚ್ 2024, 14:56 IST
ಸೋಮಪ್ಪ ಯಲಬುರ್ಗಿ
ಸೋಮಪ್ಪ ಯಲಬುರ್ಗಿ   

ಗಂಗಾವತಿ: ಜಮೀನು ಮಾಲಿಕರ ಪರವಾನಗಿ ಪಡೆಯದೇ ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರರು ಆನೆಗೊಂದಿ ಉತ್ಸವಕ್ಕೆ ಮೈದಾನ ಸಜ್ಜುಗೊಳಿಸುತ್ತಿದ್ದು, ಈ ಕುರಿತು ನ್ಯಾಯಾಲಯ ಮೆಟ್ಟಿಲೇರಿ ಉತ್ಸವ ಸ್ಥಗಿತಗೊಳಿಸುತ್ತೇನೆ ಎಂದು ಆನೆಗೊಂದಿ ಉತ್ಸವ ಮೈದಾನದ ಮಾಲಿಕನ ಸಹೋದರ ಸೋಮಪ್ಪ ಯಲಬುರ್ಗಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ’1981-82ರಲ್ಲಿ ನನ್ನ ಸಹೋದರ ಅವಪ್ಪ ಗುರಪ್ಪ ಸಜ್ಜನ್ ಇಂದಿನ ಆನೆಗೊಂದಿ ಉತ್ಸವ ನಡೆಯುವ ಮೈದಾನವನ್ನು ( ಸರ್ವೆ ನಂ 218, 3.17 ಗುಂಟೆ ಜಮೀನು)ಖರೀದಿ ಮಾಡಿದ್ದರು. ಅಂದಿನಿಂದ ಆಜಮೀನನ್ನು ಬೇಸಾಯ ಮಾಡಿಕೊಳ್ಳುತ್ತಾ ಬರಲಾಗಿದೆ. 2ನೇ ಬಾರಿ ಆನೆಗೊಂದಿ ಉತ್ಸವ ನಡೆಸಲು ಜಮೀನು ನೀಡುವಂತೆ ಅಂದಿನ ಡಿ.ಸಿ ಸತ್ಯಮೂರ್ತಿ ಮನವಿ ಮಾಡಿದಾಗ ಬಾಳೆ ಬೆಳೆ ಸಮೇತ ಜಮೀನನ್ನು ಉತ್ಸವಕ್ಕೆ ಬಿಟ್ಟುಕೊಡಲಾಗಿತ್ತು. ಅಂದಿನ ಜಿಲ್ಲಾಧಿಕಾರಿಗಳು ಬೆಳೆ ಪರಿಹಾರ ₹2 ಲಕ್ಷ ಸಹ ನೀಡಿದ್ದರು. ಉತ್ಸವ ಮುಗಿದ ನಂತರ ಏಕಾಏಕಿ ಪಹಣಿಯಲ್ಲಿ ಮೂಲ ಹೆಸರು ಬದಲಾಗಿ ಕರ್ನಾಟಕ ಸರ್ಕಾರ ನಮೂದಾಯಿತು‘ ಎಂದರು.

ಈ ಕುರಿತು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ, ಕಾನೂನು ಹೋರಾಟ ಮಾಡಿದ ನಂತರ 4 ವರ್ಷಗಳ ನಂತರ ಅವಪ್ಪ ಗುರಪ್ಪ ಸಜ್ಜನ್ ಎಂದು ಪಹಣಿಯಲ್ಲಿ ಹೆಸರು ಸೇರ್ಪಡೆಯಾಯಿತು. ನನ್ನ ಸಹೋದರ ಅನಾರೋಗ್ಯದಿಂದ ಬಳಲುತ್ತಿದ್ದು, ಸದ್ಯ ಈ ಆಸ್ತಿ ನನ್ನ ಅಧೀನದಲ್ಲಿದೆ. ಇದೀಗ ಮರಳಿ ಆನೆಗೊಂದಿ ಉತ್ಸವಕ್ಕೆ ನಮ್ಮ ಜಮೀನು ಬಳಸುತ್ತಿದ್ದು, ನಮ್ಮಿಂದ ಯಾವ ಪರವಾನಗಿಯನ್ನೂ ಪಡೆದಿಲ್ಲ ಎಂದರು.

ADVERTISEMENT

ಆನೆಗೊಂದಿ ಉತ್ಸವಕ್ಕೆ ಮೈದಾನ ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದಾಗ ತಹಶೀಲ್ದಾರರನ್ನ ಸಂಪರ್ಕಿಸಿದರೆ, ನನಗೆ ಯಾವ ಮಾಹಿತಿಯೂ ಇಲ್ಲ ಎಂದಿದ್ದಾರೆ. ಶಾಸಕರಾಗಲಿ, ಜಿಲ್ಲಾಧಿಕಾರಿಗಳಾಲಿ ಉತ್ಸವಕ್ಕೆ ಮೈದಾನ ಬೇಕು ಎಂದು ಸಂಪರ್ಕ ಮಾಡಿಲ್ಲ. ನಾಳೆ ಮತ್ತೆ ಜಮೀನು ಕುರಿತು ತೊಡಕಗಳು ಉಂಟಾದರೆ ನಾವೆಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಹಾಗಾಗಿ ಆನೆಗೊಂದಿ ಉತ್ಸವಕ್ಕೆ ಮೈದಾನ ಬಳಸದಂತೆ ನ್ಯಾಯಾಲಯ ಮೆಟ್ಟಿಲೇರಿ ತಡೆಯಾಜ್ಞೆ ತರುತ್ತೇನೆ. ಉತ್ಸವಕ್ಕೆ ಮೈದಾನಬೇಕೆಂದು ಮನವಿ ಮಾಡಿದರೆ, ಆನೆಗೊಂದಿ ಉತ್ಸವಕ್ಕೆ ನಮ್ಮ ಜಮೀನು ಬಳಕೆ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಲಿಖಿತ ಪತ್ರ ನೀಡುವ ಜತೆಗೆ ನನ್ನ ಕೆಲ ಷರತ್ತುಗಳಿಗೆ ಬದ್ದರಾಗಬೇಕು. ಆಗ ಮೈದಾನ ನೀಡಲು ಒಪ್ಪುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.