ಅಳವಂಡಿ: ಸಮೀಪದ ಕಾತರಕಿ ಗುಡ್ಲಾನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು ಗ್ರಾಮದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಮತದಾನ ಕುರಿತು ಜಾಗೃತಿ ಮೂಡಿಸಲು ನರೇಗಾ ಕಾಯಕ ಬಂಧುಗಳು ಹಾಗೂ ಕೂಲಿಕಾರರಿಂದ ಜಾಥಾ ನಡೆಯಿತು.
ಸ್ವೀಪ್ ಜಾಥಾವು ಬೇಳೂರು ಗ್ರಾಮದ ಬೆಟ್ಟದ ಲಿಂಗೇಶ್ವರ ದೇವಸ್ಥಾನದಿಂದ ಆರಂಭವಾಗಿ ಹಿರೇಸಿಂದೋಗಿ ರಸ್ತೆಯಲ್ಲಿರುವ ಬಸ್ ನಿಲ್ದಾಣದವರೆಗೆ ಕಡ್ಡಾಯ ಮತದಾನ, ನಮ್ಮ ಮತ ನಮ್ಮ ಹಕ್ಕು ಇತ್ಯಾದಿ ಘೋಷಣೆಗಳೊಂದಿಗೆ ಮತದಾರರಲ್ಲಿ ಅರಿವು ಮೂಡಿಸಲಾಯಿತು.
ತಾಲೂಕ ಸ್ವೀಪ್ ನೋಡಲ್ ಅಧಿಕಾರಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ ಮಾತನಾಡಿ, ‘ಅರ್ಹ ಎಲ್ಲ ಮತದಾರರು ಮೇ 7ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಬೇಕು. ಚುನಾವಣೆ ಆಯೋಗ ನಿಗದಿಪಡಿಸಿದ ಯಾವುದಾದರೊಂದು ದಾಖಲೆ ತೆಗೆದುಕೊಂಡು ಹೋಗಬೇಕು’ ಎಂದರು.
ತಾಲ್ಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್ ಮಾತನಾಡಿ, ‘ ನರೇಗಾ ಕೂಲಿಕಾರರು ತಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಎಲ್ಲ ಸದಸ್ಯರೊಂದಿಗೆ ಅಂದು ಮತ ಚಲಾಯಿಸಬೇಕು’ ಎಂದರು.
ನಂತರ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ತಾಲ್ಲೂಕು ಸ್ವೀಪ್ ಸಮಿತಿ ಸದಸ್ಯ ಬಸವರಾಜ ಬಳಿಗಾರ, ಪಿಡಿಒ ಪೂರ್ಣೇಂದ್ರಸ್ವಾಮಿ, ತಾಲ್ಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಕರವಸೂಲಿಗಾರ ಮರ್ದಾನಸಾಬ, ಡಿಇಒ ನಿಂಗಜ್ಜ ಕರಿಗಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.