ADVERTISEMENT

‘ವೀರಶೈವ ಪದ ಕೈಬಿಟ್ಟಿದ್ದು ಸ್ವಾಗತಾರ್ಹ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:24 IST
Last Updated 3 ಜುಲೈ 2024, 14:24 IST

ಕೊಪ್ಪಳ: ರಾಜ್ಯ ಸರ್ಕಾರ ನೂತನವಾಗಿ ಪರಿಷ್ಕರಿಸಿರುವ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ‘ವಿಶ್ವಗುರು ಬಸವಣ್ಣನವರು ಸಾಂಸ್ಕೃತಿಕ ನಾಯಕ’ ಎಂಬ ಪಾಠದಲ್ಲಿ ವೀರಶೈವ ಎಂಬ ಪದವನ್ನು ತೆಗೆದು ಹಾಕಿದ್ದಕ್ಕೆ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಗವಿಸಿದ್ಧಪ್ಪ ಕೊಪ್ಪಳ, ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ ‘ಈ ಕುರಿತು ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಪರವಾಗಿ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯರು ಅಸಮಾಧಾನ ವ್ಯಕ್ತಪಡಿಸಿದ್ದು ಸರಿಯಲ್ಲ. ಬಸವಣ್ಣನವರ ಪಾಠದಲ್ಲಿ ವೀರಶೈವ ಪದ ತೆಗೆದು ಹಾಕಿದ್ದು ಸೂಕ್ತವಾಗಿದೆ’ ಎಂದಿದ್ದಾರೆ.

‘ಬಸವಣ್ಣನವರು ಲಿಂಗಾಯತ ಪ್ರತಿಪಾದಿಸಿದರೇ ಹೊರತು ವೀರಶೈವವಲ್ಲ. ಜಗತ್ತಿನಲ್ಲಿ ಮೊದಲ ಬಾರಿಗೆ ಇಷ್ಟಲಿಂಗದ ಪರಿಕಲ್ಪನೆ ತಂದವರೇ ಬಸವಣ್ಣನವರು. ಅರಿವೇ ಗುರು, ಕಾಯಕವೇ ಕೈಲಾಸ, ದೇಹವೇ ದೇಗುಲ ಮೊದಲಾದ ಆಳ ಪರಿಕಲ್ಪನೆಗಳ ವಚನಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಪಠ್ಯ ಪರಿಷ್ಕರಣೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.