ಹಲಗೂರು: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತದಿಂದ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ.
ಹಲಗೂರಿನ ನಿವಾಸಿ ಶಿವಮಾದಯ್ಯ ಅವರ ಪತ್ನಿ ಹುಚ್ಚರಸಮ್ಮ(60) ಮೃತ ಮಹಿಳೆ.
ಸಮೀಪದ ಕೊನ್ನಾಪುರ ಗ್ರಾಮದ ಸಿದ್ದೇಗೌಡ ಅವರ ಜಮೀನಿನಿಂದ ಮರಪ್ಪನ ಕೃಷ್ಣ ಅವರ ಜಮೀನುವರೆಗೆ ಕಾಲುವೆಯ ಅಭಿವೃದ್ಧಿ ಕಾರ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಹುಚ್ಚರಸಮ್ಮ ಅವರಿಗೆ ಬೆಳಿಗ್ಗೆ 11ರ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡು ಕುಸಿದುಬಿದ್ದರು. ಇದನ್ನು ಗಮನಿಸಿದ ಕೆಲಸಗಾರರು ತುರ್ತು ಚಿಕಿತ್ಸೆ ಕೊಡಿಸಿ, ಮೈಸೂರಿನ ಜಯದೇವ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಹಲಗೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿ.ರುದ್ರಯ್ಯ ಮೃತರಿಗೆ ಸಾಂತ್ವನ ಹೇಳಿ, ಉದ್ಯೋಗ ಖಾತರಿ ಯೋಜನೆಯಡಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.