ADVERTISEMENT

ಮಂಡ್ಯ: ಗೂಡ್ಸ್ ಟೆಂಪೋ– ಕಾರು ಡಿಕ್ಕಿ; 20 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 7:23 IST
Last Updated 19 ಸೆಪ್ಟೆಂಬರ್ 2024, 7:23 IST
   

ಭಾರತೀನಗರ: ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ ಸಂಭವಿಸಿದ ಅಪಘಾತದಲ್ಲಿ 20 ಮಂದಿ ಗಾಯಗೊಂಡಿದ್ದು, 7 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಸಮೀಪದ ಮಣೀಗೆರೆ ಬಳಿ ಈ ಅಪಘಾತ ಸಂಭವಿಸಿದೆ.

ಆಟೋ ಚಾಲಕ ದುರ್ಗೇಶ್(21), ಕಾರು ಚಾಲಕ ರಾಜೇಶ್(28), ಕಾರಿನಲ್ಲಿದ್ದ,ಅಭಿ, ಚಂದನ್, ಮೋಹನ, ಬಾಲ, ಟೆಂಪೋದಲ್ಲಿದ್ದ ಕಾಂತರಾಜೇ ಅರಸ್, ವರಲಕ್ಷ್ಮೀ, ಶೆಟ್ಟಮ್ಮಣ್ಣಿ, ನಾಗರಾಜೇ ಅರಸ್, ಕಾಂಚನ ಅವರಿಗೆ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಾಳಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ.

ಮಡೇನಹಳ್ಳಿ ಗ್ರಾಮದ ದುರ್ಗೇಶ್ ತನ್ನ ಅಶೋಕ ಲೈಲ್ಯಾಂಡ್ ಗೂಡ್ಸ್ ಟೆಂಪೋದಲ್ಲಿ ತೊರೆ ಬೊಮ್ಮನಹಳ್ಳಿ ಗ್ರಾಮದಿಂದ 25 ಮಂದಿಯನ್ನು ಮೂಗನಕೊಪ್ಪಲು ಗ್ರಾಮಕ್ಕೆ ಸಾವಿನ ಕಾರ್ಯಕ್ಕೆ ಕರೆದೊಯ್ಯುತ್ತಿದ್ದು, ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಾಪಸ್ಸಾಗುತ್ತಿದ್ದ ಬೆಂಗಳೂರು ಬನಶಂಕರಿ ನಿವಾಸಿಗಳಿದ್ದ ಕಾರಿಗೆ ಮಣಿಗೆರೆ ಬಳಿ ಮುಖಾಮುಖಿ ಡಿಕ್ಕಿ ಹೊಡೆದಿದೆ.

ADVERTISEMENT

ಗೂಡ್ಸ್ ಟೆಂಪೋ ರಸ್ತೆ ಮಧ್ಯ ಭಾಗದಲ್ಲಿ ಮಗುಚಿ ಬಿದಿದ್ದು, ಟೆಂಪೋದೊಳಗೆ ಕುಳಿತಿದ್ದವರಿಗೆ ಗಾಯಗಳಾಗಿದೆ. ಕಾರು ಸಹ ಜಖಂಗೊಂಡಿದ್ದು, ಕಾರಿನಲ್ಲಿದ್ದ 5 ಮಂದಿಗೂ ಗಂಭೀರ ಸ್ವರೂಪದ ಪೆಟ್ಟಾಗಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಸಿಬ್ಬಂದಿ ಗಾಯಳುಗಳನ್ನು ಆಂಬುಲೆನ್ಸ್ ಮೂಲಕ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಮದ್ರದಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕಳುಹಿಸಿದರು.

ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಾಲ್ಲೂಕು ತಹಸೀಲ್ದಾರ್ ಡಾ.ಸ್ಮಿತಾರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಗಾಯಾಳುಗಳ ಬಗ್ಗೆ ವಿವರ ಪಡೆಯಲು ಮಿಮ್ಸ್ಗೆ ತೆರಳಿದರು.

ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.