ADVERTISEMENT

ಬಿಎಂಸಿ ಕೇಂದ್ರ ರೈತರಿಗೆ ವರದಾನ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಹೈನುಗಾರಿಕೆಗೆ ಪ್ರೋತ್ಸಾಹ: ಶಾಸಕ ದರ್ಶನ್ ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 5:26 IST
Last Updated 21 ಜೂನ್ 2024, 5:26 IST
ಪಾಂಡವಪುರ ತಾಲ್ಲೂಕಿನ ಬಿಂಡಹಳ್ಳಿ ಗ್ರಾಮದಲ್ಲಿ ಡೇರಿ ನಿರ್ದೇಶಕರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸನ್ಮಾನಿಸಿದರು. ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಮುಖಂಡರಾದ ಕೆ.ಕುಬೇರ, ಬಿ.ಜಿ.ಸ್ವಾಮಿ, ಸಿ.ಆರ್.ರಮೇಶ್‌ ಪಾಲ್ಗೊಂಡಿದ್ದರು
ಪಾಂಡವಪುರ ತಾಲ್ಲೂಕಿನ ಬಿಂಡಹಳ್ಳಿ ಗ್ರಾಮದಲ್ಲಿ ಡೇರಿ ನಿರ್ದೇಶಕರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸನ್ಮಾನಿಸಿದರು. ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಮುಖಂಡರಾದ ಕೆ.ಕುಬೇರ, ಬಿ.ಜಿ.ಸ್ವಾಮಿ, ಸಿ.ಆರ್.ರಮೇಶ್‌ ಪಾಲ್ಗೊಂಡಿದ್ದರು   

ಪಾಂಡವಪುರ: ಪ್ರತಿ ಗ್ರಾಮದಲ್ಲಿ ಡೇರಿಯ ಬಿಎಂಸಿ ಕೇಂದ್ರಗಳನ್ನು ತೆರೆದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಮತ್ತು ಹೈನುಗಾರಿಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಾಂತಾಗುತ್ತದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲ್ಲೂಕಿನ ಬಿಂಡಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ (ಡೇರಿ) ನೂತನವಾಗಿ ಪ್ರಾರಂಭಿಸಲಾಗಿರುವ ಬಿಎಂಸಿ ಕೇಂದ್ರವನ್ನು ಉದ್ಪಾಟಿಸಿ ಮಾತನಾಡಿದರು.

ಬಿಂಡಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರ ಅನುಕೂಲಕ್ಕಾಗಿ ಬಿಎಂಸಿ ಕೇಂದ್ರ ಪ್ರಾರಂಭಿಸಲಾಗಿದ್ದು, ಇದರಿಂದ ರೈತರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೈನುಗಾರಿಕೆ ಲಾಭದಾಯಕವಾಗಿದ್ದು, ರೈತರು ಜೀವನೋಪಾಯ ಮಾರ್ಗವಾಗಿ ಇದನ್ನು ಬಳಸಿಕೊಳ್ಳಬೇಕು ಎಂದರು.

ADVERTISEMENT

ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಬಿಂಡಹಳ್ಳಿ ಗ್ರಾಮದಲ್ಲಿ 3 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಅಳವಡಿಕೆ ಮಾಡಲಾಗಿದೆ. ನಾನು ನಿರ್ದೇಶಕನಾದ ಮೇಲೆ ಚಿಕ್ಕಾಡೆ, ಕ್ಯಾತನಹಳ್ಳಿ, ಅರಳಕುಪ್ಪೆ, ಕೋಡಾಲ, ಎರೇಗೌಡನಹಳ್ಳಿ, ಕಡಬ, ನಾರಾಯಣಪುರ, ಚಿನಕುರಳಿ ಸೇರಿದಂತೆ 10 ಬಿಎಂಸಿ ಕೇಂದ್ರಗಳನ್ನು ಮಂಜೂರು ಮಾಡಿಸಿದ್ದೇನೆ. ಇದರಿಂದ ಗುಣಮಟ್ಟದ ಹಾಲು ಒಕ್ಕೂಟಕ್ಕೆ ಸರಬರಾಜಾಗುತ್ತಿದೆ ಎಂದು ಹೇಳಿದರು.

ರೈತರಿಗೆ ಅನುಕೂಲವಾಗುವ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೆಲಸವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ನಾವು ಮಾಡುತ್ತಿದ್ದೇವೆ. ರೈತರು ಕೂಡ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿದರೆ ಒಕ್ಕೂಟ ಪ್ರಗತಿ ಕಾಣಲು ಸಾಧ್ಯವಾಗುತ್ತದೆ. ರೈತರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿ ಎಚ್.ಎನ್. ಉಷಾ, ಕಾಂಗ್ರೆಸ್ ಮುಖಂಡರಾದ ಕೆ.ಕುಬೇರ, ಬಿ.ಕೆ.ಸ್ವಾಮಿ, ಸಿ.ಆರ್.ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.