ADVERTISEMENT

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ವಧು–ವರರ ಸಮಾವೇಶ: ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:15 IST
Last Updated 2 ಜುಲೈ 2024, 14:15 IST
ಪಾಂಡವಪುರದಲ್ಲಿ ನಡೆದ ಒಕ್ಕಲಿಗ ವಧು–ವರರ ಸಮಾವೇಶವನ್ನು ಲಯನ್ ಕೆ.ದೇವೇಗೌಡ ಉದ್ಫಾಟಿಸಿದರು. ಮುಖಂಡರಾದ ರವಿಕುಮಾರ್, ಮಲ್ಲಿಕಾರ್ಜುನಗೌಡ, ಎಚ್.ಆರ್. ಧನ್ಯಕುಮಾರ್, ಕೆ.ವಿ. ಬಸವರಾಜು, ಎಚ್. ಧನ್ಯಕುಮಾರ್, ಬಿ.ಎಸ್. ಜಯರಾಮ್ ಇದ್ದಾರೆ.
ಪಾಂಡವಪುರದಲ್ಲಿ ನಡೆದ ಒಕ್ಕಲಿಗ ವಧು–ವರರ ಸಮಾವೇಶವನ್ನು ಲಯನ್ ಕೆ.ದೇವೇಗೌಡ ಉದ್ಫಾಟಿಸಿದರು. ಮುಖಂಡರಾದ ರವಿಕುಮಾರ್, ಮಲ್ಲಿಕಾರ್ಜುನಗೌಡ, ಎಚ್.ಆರ್. ಧನ್ಯಕುಮಾರ್, ಕೆ.ವಿ. ಬಸವರಾಜು, ಎಚ್. ಧನ್ಯಕುಮಾರ್, ಬಿ.ಎಸ್. ಜಯರಾಮ್ ಇದ್ದಾರೆ.   

ಪಾಂಡವಪುರ: ಮದುವೆ ವಿಚಾರದಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ಒಕ್ಕಲಿಗ ವಧು–ವರರ ಸಮಾವೇಶ ನಡೆಸಲಾಗುತ್ತಿದೆ ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ರಾಜ್ಯ ಘಟಕದ ಅಧ್ಯಕ್ಷ ರವಿಕುಮಾರ್ ಹೇಳಿದರು.

ಪಟ್ಟಣದ ವಿಜಯ ಶಿಕ್ಷಣ ಸಂಸ್ಥೆಯ ಕೃಷ್ಣಕುಮಾರ್ ಸಭಾಂಗಣದಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಪಾಂಡವಪುರ ಶಾಖೆ ಆಯೋಜಿಸಿದ್ದ ಒಕ್ಕಲಿ ವಧು–ವರರ ಸಮಾವೇಶದಲ್ಲಿ ಅವರು ಮಾತನಾಡಿ, ‘ಶ್ರೀಮಂತರ ಮಕ್ಕಳಿಗೆ ಮಾತ್ರ ಮಧ್ಯವರ್ತಿಗಳು ಆದ್ಯತೆ ನೀಡುತ್ತಿದ್ದು, ವಧು–ವರರಿಂದ ಹಣ ಪಡೆಯುತ್ತಾರೆ. ಇದನ್ನು ನಿಯಂತ್ರಿಸಲು ನಮ್ಮ ಸಂಸ್ಥೆ ವಧು–ವರರ ಸಮಾವೇಶ ಹಮ್ಮಿಕೊಳ್ಳುತ್ತಿದೆ’ ಎಂದು ತಿಳಿಸಿದರು.

‘ವೈದ್ಯರು, ಎಂಜಿನಿಯರ್, ಸಾಫ್ಟ್‌ವೇರ್ ಉದ್ಯೋಗಿಗಳು ಸೇರಿದಂತೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರು ಹೆಚ್ಚಾಗಿ  ನೋಂದಾಯಿಸಿಕೊಳ್ಳುತ್ತಿದ್ದು, ರೈತರ ಮಕ್ಕಳು, ಅವಿದ್ಯಾವಂತರ ನೋಂದಣಿ ಕಡಿಮೆಯಾಗಿದೆ. ಹಾಗಾಗಿ ಗ್ರಾಮೀಣರಿಗೆ ಅನುಕೂಲವಾಗಲೆಂದು ತಾಲ್ಲೂಕು ಮಟ್ಟದ ಸಮಾವೇಶ ಆಯೋಜಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಲಯನ್ ಕೆ.ದೇವೇಗೌಡ ಮಾತನಾಡಿ, ‘ಗ್ರಾಮೀಣ ಪ್ರದೇಶದ ಒಕ್ಕಲಿಗ ಸಮುದಾಯದ ಅವಿವಾಹಿತ ರೈತ ಮಕ್ಕಳಿಗೆ ಮದುವೆ ಭಾಗ್ಯ ದೊರಕಿಸಿಕೊಡಬೇಕು ಎಂಬ ಕಲ್ಪನೆಯಿಂದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಒಕ್ಕಲಿಗರ ವಧು–ವರರ ಸಮಾವೇಶ ನಡೆಸಲಾಗುತ್ತಿದೆ. ರೈತರು ಮಕ್ಕಳು ಹೆಚ್ಚು ಶಿಕ್ಷಿತರಲ್ಲ, ಉದ್ಯೋಗದಲ್ಲಿ ಇರುವುದಿಲ್ಲ. ಕೃಷಿ ಮೇಲೆ ಅವಲಂಬಿತರಾಗಿದ್ದಾರೆ ಎಂಬ ಕಾರಣಗಳಿಂದ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೈತರ ಮಕ್ಕಳು ಸೇರಿದಂತೆ ಸಮಾಜದ ಇತರರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದ್ದು ಎಲ್ಲರೂ ಸದ್ಫಳಕೆ ಮಾಡಿಕೊಳ್ಳಬೇಕು’ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ವಿದ್ಯಾಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ. ಬಸವರಾಜು, ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್‌ನ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಕಾರ್ಯಾಧ್ಯಕ್ಷ ಎಚ್.ಆರ್. ಧನ್ಯಕುಮಾರ್, ಕಾರ್ಯದರ್ಶಿ ಕೆ.ಕುಬೇರ, ಉಪಾಧ್ಯಕ್ಷ ಬಿ.ಎಸ್. ಜಯರಾಮು, ಖಜಾಂಚಿ ರೈಟರ್ ಸ್ವಾಮಿಗೌಡ, ಸಂಘಟನಾ ಕಾರ್ಯದರ್ಶಿ ಕೋ.ಪು. ಗುಣಶೇಖರ್, ನಿರ್ದೇಶಕರಾದ ಅನಿತಾಲೋಕೇಶ್, ಮಂಜುಳಾ ಶಂಕರ್‌ನಾಗ್, ಡಾ.ಸಿ.ಎ. ಅರವಿಂದ್, ಇ.ಎಸ್.ನಾಗರಾಜು, ಸಿ.ಎಸ್.ಸುಬ್ಬೇಗೌಡ, ಚಂದ್ರಶೇಖರಯ್ಯ, ಬಿ.ಜೆ.ಸ್ವಾಮಿ, ಡಾ.ಮಾದಯ್ಯ, ಗಿರೀಗೌಡ, ನಾಗೇಗೌಡ ಇದ್ದರು.

ಸಮಾವೇಶದಲ್ಲಿ 7 ವಧು ಹಾಗೂ 185 ವರರು ಹೆಸರು ನೋಂದಾಯಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.