ADVERTISEMENT

ಶ್ರೀರಂಗಪಟ್ಟಣ ಕೋಟೆಯಲ್ಲಿ ನೆಲಮಾಳಿಗೆ ಪತ್ತೆ

ಗಣಂಗೂರು ನಂಜೇಗೌಡ
Published 7 ಮೇ 2024, 5:44 IST
Last Updated 7 ಮೇ 2024, 5:44 IST
<div class="paragraphs"><p>ನೆಲಮಾಳಿಗೆ ಒಳಗಿನ ದೃಶ್ಯ</p><p></p></div>

ನೆಲಮಾಳಿಗೆ ಒಳಗಿನ ದೃಶ್ಯ

   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಐತಿಹಾಸಿಕ ಜೋಡಿ ನೆಲಮಾಳಿಗೆಗಳು ಪತ್ತೆಯಾಗಿವೆ.

ADVERTISEMENT

ಪಟ್ಟಣದ ದಕ್ಷಿಣ ಭಾಗದ ಎರಡು ಮತ್ತು ಮೂರನೇ ಸುತ್ತಿನ ಕೋಟೆಯ ನಡುವೆ, ಕಂದಕಕ್ಕೆ ಹೊಂದಿಕೊಂಡಂತೆ ನೆಲಮಾಳಿಗೆಗಳು ಕಂಡು ಬಂದಿವೆ. ಮುಳ್ಳು ಗಂಟಿಗಳಿಂದ ಮುಚ್ಚಿ ಹೋಗಿದ್ದ ಈ ನೆಲಮಾಳಿಗೆಗಳನ್ನು ಇತಿಹಾಸ ಸಂಶೋಧಕರಾದ ಮೈಸೂರಿನ ವೈ. ಹರ್ಷವರ್ಧನ್‌ ಮತ್ತು ಗುರುಪ್ರಸಾದ್‌ ನೇತೃತ್ವದ ತಂಡ ಎರಡು ದಿನಗಳ ಹಿಂದಷ್ಟೇ ಪತ್ತೆ ಹಚ್ಚಿದೆ.

ಈ ನೆಲಮಾಳಿಗೆಗಳ ಸುತ್ತ ವೃತ್ತಾಕಾರದ ಗೋಡೆಯಂತಹ ರಚನೆ ಇದೆ. ಅದರ ನಡುವೆ ಈ ನೆಲಮಾಳಿಗೆಗಳನ್ನು ನಿರ್ಮಿಸಲಾಗಿದೆ. ನೆಲಮಟ್ಟದಿಂದ ಸುಮಾರು 10 ಅಡಿ ಆಳದಲ್ಲಿರುವ ಈ ನೆಲಮಾಳಿಗೆಗಳು ದೂರದಿಂದ ನೋಡಿದರೆ ಮಣ್ಣಿನ ದಿಬ್ಬದಂತೆ ಕಾಣುತ್ತವೆ. ಆಳವಾದ ಕಂದಕಗಳನ್ನು ದಾಟಿ, ಕೊರಕಲು ಇಳಿದು ಹೋದರೆ ಇವುಗಳನ್ನು ನೋಡಬಹುದು.

ರಚನೆ: ಈ ನೆಲಮಾಳಿಗೆಗಳನ್ನು ಒಂದರ ಪಕ್ಕ ಒಂದರಂತೆ ನಿರ್ಮಿಸಿದ್ದು, 8 ಅಡಿ ಅಗಲ ಮತ್ತು 18 ಅಡಿ ಉದ್ದ ಇವೆ. ಒಳಗೆ ಪ್ರವೇಶಿಸಲು ಮೂರು ಅಡಿ ಎತ್ತರ ಹಾಗೂ ಎರಡು ಅಡಿ ಅಗಲದ ಕಲ್ಲಿನ ದ್ವಾರವಿದೆ. ಈ ದ್ವಾರ ಬಂಧಕ್ಕೆ ಅಗಳಿ ಹಾಕಲು ಮೂರೂವರೆ ಇಂಚು ಆಳವಾದ ರಂಧ್ರವನ್ನು ಕೊರೆಯಲಾಗಿದೆ.

ಕಲ್ಲು ಚಪ್ಪಡಿಗಳು ಮತ್ತು ಚುರಕಿ ಗಾರೆಯನ್ನು ಬಳಸಿ, ಒಂದು ಹನಿ ನೀರೂ ಒಳಗೆ ಜಿನುಗದಂತೆ ನೆಲಮಾಳಿಗೆಗಳ ಚಾವಣಿಯನ್ನು ನಿರ್ಮಿಸಲಾಗಿದೆ. ಇವುಗಳ ಗೋಡೆಗಳು ಕೂಡ ಕಲ್ಲು ಮತ್ತು ಚುರಕಿ ಗಾರೆಯಿಂದಲೇ ನಿರ್ಮಿಸಲ್ಪಟ್ಟಿವೆ. ಎರಡನೇ ಕಂದಕದಿಂದ ನೆಲಮಾಳಿಗೆವರೆಗೆ 4 ಅಡಿ ಅಗಲದ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಪಟ್ಟಣದ ಒಳಕ್ಕೆ ಅಥವಾ ಹೊರಗೆ ಬರಲು ಯಾವುದೇ ಸಂಪರ್ಕ ಸೇತು ಕಂಡು ಬಂದಿಲ್ಲ.

‘ಕೋಟೆ ಮತ್ತು ಕಂದಕಗಳ ನಡುವೆ ಪುರಾತನ ಕಟ್ಟಡ ಇರುವಂತಿವೆ ಎಂದು ಪಟ್ಟಣದವರೇ ಆದ ಡಾ.ಸುಜಯಕುಮಾರ್‌ ಒಮ್ಮೆ ಹೇಳಿದ್ದರು. ಆ ಮಾಹಿತಿ ಅಧರಿಸಿ ಸ್ಥಳಕ್ಕೆ ಭೇಟಿ ನೀಡಿದಾಗ ನೆಲಮಾಳಿಗೆಗಳು ಕಂಡು ಬಂದಿವೆ. ಚರಿತ್ರೆಯ ಪುಟಗಳಲ್ಲಿ ಇದುವರೆಗೆ ಇವುಗಳ ಬಗ್ಗೆ ಎಲ್ಲಿಯೂ ಮಾಹಿತಿ ಅಥವಾ ಚಿತ್ರಗಳು ಪ್ರಕಟವಾಗಿಲ್ಲ. ಇಲ್ಲಿಗೆ ತಲುಪಲು ದಾರಿ ಇಲ್ಲದ ಕಾರಣ ಇತ್ತ ಯಾರೂ ಬಂದಂತಿಲ್ಲ’ ಎಂದು ಹರ್ಷವರ್ಧನ್‌ ಹೇಳುತ್ತಾರೆ.

‘ಇವು ಟಿಪ್ಪು ಸುಲ್ತಾನ್‌ ಕಾಲದ ನಿರ್ಮಾಣ ಎಂಬುದು ರಚನಾ ಶೈಲಿಯಿಂದ ಸ್ಪಷ್ಪವಾಗಿದೆ. ಸೈನಿಕರು ಮೇಲೆ ನಿಂತು ಕಾವಲು ಕಾಯಲು ಮತ್ತು ಒಳಗೆ ವಿಶ್ರಾಂತಿ ಪಡೆಯಲೆಂದು ಇವುಗಳನ್ನು ನಿರ್ಮಿಸಿರುವ ಸಾಧ್ಯತೆ ಇದೆ. ಅಡಗುದಾಣ ಅಥವಾ ಶಸ್ತ್ರಾಸ್ತ್ರ ಸಂಗ್ರಹಕ್ಕೂ ಬಳಕೆ ಆಗಿರಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು. ಇವು ಐತಿಹಾಸಿಕ ಮಹತ್ವದ ಕುರುಹುಗಳಾಗಿದ್ದು, ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಪಟ್ಟಣದ ದಕ್ಷಿಣ ಭಾಗದ ಎರಡು ಮತ್ತು ಮೂರನೇ ಕೋಟೆ ಮಧ್ಯೆ ನೆಲಮಾಳಿಗೆ ರೀತಿಯ ರಚನೆಗಳು ಇರುವುದು ಇದುವರೆಗೆ ಗಮನಕ್ಕೆ ಬಂದಿಲ್ಲ. ಆದಷ್ಟು ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಐತಿಹಾಸಿಕ ಕಟ್ಟಡಗಳ ಸ್ಥಿತಿಗತಿಯ ಬಗ್ಗೆ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು’ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯೂರೇಟರ್‌ ಎನ್‌.ಎನ್‌. ಗೌಡ ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ದ್ವೀಪದ ದಕ್ಷಿಣ ಭಾಗದಲ್ಲಿ, ಎರಡು ಮತ್ತು ಮೂರನೇ ಸುತ್ತಿನ ಕೋಟೆಗಳ ನಡುವೆ ಪತ್ತೆಯಾಗಿರುವ ಐತಿಹಾಸಿಕ ನೆಲಮಾಳಿಗೆ

ನೆಲಮಾಳಿಗೆಗೆ ಇರುವ ಪ್ರವೇಶ ದ್ವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.