ಮಂಡ್ಯ: ತಾಲ್ಲೂಕಿನ ತೂಬಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ(ಕಾಂಪೌಂಡ್) ಉರುಳಿಸಿ ಮನೆಗೆ ದಾರಿ ಮಾಡಿಕೊಂಡಿದ್ದಾನೆ ಎಂದು ಅರೋಪಿಸಿ ವ್ಯಕ್ತಿಯ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರು ಹಾಗೂ ಶಿಕ್ಷಕರು ದೂರು ನೀಡಿದ್ದಾರೆ.
ಗ್ರಾಮದ ಚೆನ್ನೇಗೌಡ ಎಂಬುವ ವ್ಯಕ್ತಿಯೇ ತನ್ನ ಮನೆ ಎದುರಿದ್ದ ಶಾಲಾ ತಡೆಗೋಡೆಯ ಒಂದು ಭಾಗವನ್ನು ಉರುಳಿಸಿದ್ದಾನೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಶಾಲಾ ತಡೆಗೋಡೆಯು ಮಳೆಯಿಂದ ಬಿದ್ದು ಹೋಗಿದೆ ನಾನೇನು ಮಾಡಿಲ್ಲ, ಅಲ್ಲಿಗೆ ಮಣ್ಣು ಹಾಕಿಸಿ ಮನೆಗೆ ದಾರಿ ಮಾಡಿಕೊಳ್ಳುತ್ತೇನೆ ಎಂಬ ಗ್ರಾಮಸ್ಥರ ಮುಂದೆ ಚೆನ್ನೇಗೌಡ ಹೇಳಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೊಲೀಸರಿಗೆ ಸದ್ಯಕ್ಕೆ ದೂರು ನೀಡಿರುವ ಆಧಾರದ ಮೇಲೆ ವಿಚಾರಣೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಸ್ಡಿಎಂಸಿ ಮತ್ತು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಕ್ರಮಕ್ಕೆ ಆಗ್ರಹ:
ಚೆನ್ನೇಗೌಡ ಮನೆ ಉತ್ತರ ಭಾಗಕ್ಕೆ ರಸ್ತೆಯಿದೆ. ಆದರೆ ಅದರಲ್ಲಿ ಅವರು ತಿರುಗಾಡುವುದಿಲ್ಲ ಪೂರ್ವಕ್ಕೆ ಇರುವ ಶಾಲಾ ತಡೆಗೋಡೆಯನ್ನು ಉರುಳಿಸಿ ದಾರಿ ಮಾಡಿಕೊಳ್ಳುತ್ತೇನೆ ಎಂಬುದನ್ನು ಗ್ರಾಮದಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದ, ಜೊತೆಗೆ ಈ ನಮ್ಮ ಶಾಲೆಯು ಕಾಂಪೌಂಡ್ ಹಾಕಿಸಿ 40 ವರ್ಷ ಆಗಿದೆ. ಈ ವ್ಯಕ್ತಿಯು ಮನೆ ಕಟ್ಟಿ ಆರೇಳು ವರ್ಷ ಕಳೆದಿದೆ, ಇಷ್ಟೆಲ್ಲಾ ಅವಾಂತರ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮದ ಮುಖಂಡರಾದ ಚಂದ್ರು, ಶ್ರೀಧರ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.