ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ– ಮೈಸೂರು ಸಂಪರ್ಕ ರಸ್ತೆಯಲ್ಲಿ ಹೆಬ್ಬಾಡಿಹುಂಡಿ ಗೇಟ್ ಬಳಿ ಇರುವ ಪ್ರಯಾಣಿಕರ ತಂಗುದಾಣ ಶಿಥಿಲವಾಗಿದ್ದು, ನೀರು ನಿಲ್ಲುತ್ತಿದೆ.
ರಸ್ತೆ ಮಟ್ಟಕ್ಕಿಂತ ಕೆಳಗೆ ಇರುವುದರಿಂದ ಸೋನೆ ಮಳೆ ಸುರಿದರೂ ರಸ್ತೆಯ ನೀರು ಪ್ರಯಾಣಿಕರ ತಂಗುದಾಣದ ಒಳಕ್ಕೆ ಹರಿದು ಬರುತ್ತದೆ. ಮೈಸೂರು– ಮಹದೇವಪುರ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಿದ ಬಳಿಕ ಪ್ರಯಾಣಿಕರ ತಂಗುದಾಣದ ನಿಲ್ಲುವ ಸ್ಥಳ ರಸ್ತೆಗಿಂತ ಕೆಳಕ್ಕೆ ಹೋಗಿದೆ. ಒಳಗೆ ನೀರು ನಿಲ್ಲಲು ಇದು ಮುಖ್ಯ ಕಾರಣವಾಗಿದೆ. ನೀರು ನಿಲ್ಲುವುದರಿಂದ ಗೋಡೆಗಳಿಗೆ ಶೀತ ಏರುತ್ತಿದ್ದು, ಅವೂ ಶಿಥಿಲವಾಗುತ್ತಿವೆ.
ತಂಗುದಾಣದ ಚಾವಣಿಯೂ ಶಿಥಿಲವಾಗಿದೆ. ಗಾರೆಯ ಚಕ್ಕೆಗಳು ಮೇಲಿಂದ ಮೇಲೆ ಉದುರುತ್ತಿವೆ. ಹಾಗಾಗಿ ಈ ತಂಗುದಾಣದ ಒಳಗೆ ನಿಲ್ಲಲು ಜನರು ಭಯಪಡುತ್ತಿದ್ದಾರೆ. ಬಸ್ಗಳಿಗೆ ಕಾಯುವವರು ಬಿಸಿಲು, ಮಳೆಯಲ್ಲಿ ಹೈರಾಣಾಗುತ್ತಿದ್ದಾರೆ.
‘ಮೈಸೂರು ಇತರೆಡೆ ಹೋಗುವ ಹಂಪಾಪುರ, ಹೆಬ್ಬಾಡಿಹುಂಡಿ ಇತರ ಗ್ರಾಮಗಳ ಜನರು ಬಸ್ಗಳಿಗೆ ಕಾಯುತ್ತಾ ಈ ತಂಗುದಾಣದಲ್ಲಿ ನಿಲ್ಲುತ್ತಿದ್ದರು. ಈಚಿನ ದಿನಗಳಲ್ಲಿ ಇದು ಶಿಥಿಲಗೊಂಡು ಒಳಗೆ ನೀರು ನಿಲ್ಲುವುದರಿಂದ ಈ ಪ್ರಯಾಣಿಕರ ತಂಗುದಾಣ ನಿಷ್ಪ್ರಯೋಜಕವಾಗಿದೆ. ಇದನ್ನು ನೆಲಸಮ ಮಾಡಿ ಹೊಸ ತಂಗುದಾಣ ನಿರ್ಮಿಸಬೇಕು’ ಎಂದು ಮೇಳಾಪುರ ಯೋಗೇಶ್, ಹೆಬ್ಬಾಡಿಹುಂಡಿ ಚನ್ನೇಗೌಡ ಇತರರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.