ಮಂಡ್ಯ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಲ್ಪಿಸಲು ಸದನದಲ್ಲಿ ಸಮಗ್ರವಾಗಿ ಚರ್ಚೆ ನಡೆಸುವಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಶಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಮನವಿ ನೀಡಿದರು.
ಈಗಾಗಲೇ ಕಾವೇರಿ ನೀರು ನಿಯಂತ್ರಣ ಸಮಿತಿ ಜುಲೈ 31ರವರೆಗೆ ಪ್ರತಿದಿನ ಒಂದು ಟಿ.ಎಂ.ಸಿ ಅಡಿ ನೀರು ಬಿಡಬೇಕೆಂದು ಶಿಫಾರಸು ಮಾಡಿದೆ. ಈಗ ಇರುವ ಕಾವೇರಿ ಕೊಳ್ಳದ ರೈತರ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಬಿಡುವುದು ಸಾಧ್ಯವಿಲ್ಲ. ಸರ್ಕಾರ ಈಗಾಗಲೇ ಜು.14ರಂದು ಸರ್ವ ಪಕ್ಷ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಎಲ್ಲರೂ ಪಕ್ಷಾತೀತವಾಗಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜು.15ರಂದು ಪ್ರಾರಂಭವಾಗುವ ಅಧಿವೇಶನದಲ್ಲಿ ಸಮಗ್ರವಾದ ಚರ್ಚೆಯನ್ನು ಮಾಡಬೇಕು. ಕಾವೇರಿ ಕೊಳ್ಳದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಬೆಳೆ ಪರಿಹಾರ ಕೂಡ ಸರ್ಕಾರ ಸರಿಯಾಗಿ ನೀಡಲಿಲ್ಲ. ಇರುವಷ್ಟು ಬೆಳೆನಾದರೂ ಉಳಿಸಲು ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಾಧಿಕಾರಗಳು ಆದೇಶ ಮಾಡುವ ಮೊದಲು ಕಾವೇರಿ ಕೊಳ್ಳದ ಪ್ರದೇಶದಲ್ಲಿ ವೀಕ್ಷಣೆ ಮಾಡಿ, ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡು ನಮ್ಮ ರಾಜ್ಯದ ಪರವಾಗಿ ನ್ಯಾಯ ನೀಡಬೇಕು. ಎಲ್ಲಾ ಸಂಸದರು ಮತ್ತು ಶಾಸಕರುಗಳು ಸಭೆ ಮಾಡಿ, ಕಾವೇರಿಯ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಎರಡು ಸದನದಲ್ಲಿಯೂ ಕಾವೇರಿ ವಿಷಯ ಚರ್ಚೆ ನಡೆಯಬೇಕು. ರಾಜ್ಯ ಸರ್ಕಾರ ಚರ್ಚೆ ಮಾಡುತ್ತೇವೆ ಎಂದು ಹೇಳಿದೆ. ಕಾನೂನಾತ್ಮಕವಾಗಿ ನ್ಯಾಯ ಸಿಗುವ ಕಡೆ ವಿಶ್ವಾಸವಿದೆ ಎಂದರು.
ಕಾವೇರಿ ಚಳವಳಿಯ ಉದ್ದೇಶ ನಮ್ಮ ಕಾವೇರಿ ಮತ್ತು ರೈತರ ಅಸ್ಮಿತೆ ಉಳಿಸಿಕೊಳ್ಳಲು. ಕೋರ್ಟಿನ ಆದೇಶ ಪಾಲನೆ ಮಾಡುವುದು ವಾಸ್ತವತೆಗೆ ದೂರುವಾದುದು, ಸಂಸದರ ಹೊಣೆಗಾರಿಕೆಯು ಹೆಚ್ಚಿರುವುದರಿಂದ ಅವರು ಕಾವೇರಿ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಾವೇರಿ ಉಳಿಸಿಕೊಳ್ಳಲು ಪಕ್ಷಾತೀತವಾಗಿ ಹೋರಾಡಿ ಎರಡು ಸದನಗಳಲ್ಲೂ ಕಾವೇರಿ ಚರ್ಚೆ ನಡೆಸಿ ರಾಜ್ಯದ ರೈತರ ಹಿತ ಕಾಪಾಡಲು ಮನವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.