ADVERTISEMENT

ದಸರಾ | ಅ.3ರಿಂದ ಕಾವೇರಿ ಆರತಿ: ಶಾಸಕ ರಮೇಶ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 13:59 IST
Last Updated 29 ಸೆಪ್ಟೆಂಬರ್ 2024, 13:59 IST
ರಮೇಶ ಬಂಡಿಸಿದ್ದೇಗೌಡ
ರಮೇಶ ಬಂಡಿಸಿದ್ದೇಗೌಡ   

ಶ್ರೀರಂಗಪಟ್ಟಣ: ‘ಪಟ್ಟಣದಲ್ಲಿ ಅ.4ರಿಂದ ನಾಲ್ಕು ದಿನಗಳ ಕಾಲ ದಸರಾ ಉತ್ಸವ ನಡೆಯುವ ನಿಮಿತ್ತ ಅ.3ರಿಂದ ಗಂಗಾ ಆರತಿ ಮಾದರಿಯಲ್ಲಿ ಪ್ರಾಯೋಗಿಕವಾಗಿ ಕಾವೇರಿ ಆರತಿ ನಡೆಯಲಿದೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

‘ಶ್ರೀರಂಗನಾಥಸ್ವಾಮಿ ದೇವಾಲಯ ಸಮೀಪದ ಕಾವೇರಿ ನದಿ ಸ್ನಾನಘಟ್ಟದಲ್ಲಿ 5 ದಿನಗಳ ಕಾವೇರಿ ಆರತಿ ಜರುಗಲಿದೆ. ದಸರಾ ಉತ್ಸವ ಮುಗಿದ ಬಳಿಕ ಕಾವೇರಿ ಆರತಿಗೆ ಸೂಕ್ತ ಸ್ಥಳವನ್ನು ನಿಗದಿ ಮಾಡಲಾಗುತ್ತದೆ. ಆ ಸ್ಥಳದಲ್ಲಿ ವಾರದಲ್ಲಿ ಎರಡು ದಿನ, ಗೋಧೂಳಿ ಲಗ್ನದಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ’ ಎಂದು ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ತಿಳಿಸಿದರು.

‘ಹರಿದ್ವಾರ ಮತ್ತು ಕಾಶಿ ಮಾದರಿಯಲ್ಲಿ ನಡೆಯುವ ಗಂಗಾ ಆರತಿಯ ಮಾದರಿಯಲ್ಲೇ ಕಾವೇರಿ ಆರತಿ ನಡೆಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ನೇತೃತ್ವ ತಂಡ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಕಾವೇರಿ ಆರತಿ ನಡೆಸುವ ಸರ್ಕಾರದ ಯೋಜನೆಗೆ ಸಾರ್ವಜನಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ದಿಗೂ ನೆರವಾಗಲಿದೆ’ ಎಂದು ರಮೇಶ ಬಂಡಿಸಿದ್ದೇಗೌಡ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.